ADVERTISEMENT

ರೈತ ಸಂಘದಿಂದ ನಾಳೆ ಶಿರಾ ಬಂದ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 13:49 IST
Last Updated 9 ಆಗಸ್ಟ್ 2023, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿರಾ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗಸ್ಟ್ 11ರಂದು ಬಂದ್‌ಗೆ ಕರೆ ನೀಡಿರುವುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯಾರಾಧ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಿಂಟಲ್‌ಗೆ ₹ 18 ಸಾವಿರಕ್ಕೆ ಮಾರಾಟವಾಗುತ್ತಿದ್ದ ಉಂಡೆ ಕೊಬ್ಬರಿ ಈಗ ₹7,500 ಮಾರಾಟವಾಗುತ್ತಿದೆ. ಈ ಬಗ್ಗೆ ಸರ್ಕಾರ ಜಾಣ ಮೌನ ತಾಳಿದೆ ಎಂದರು.

ಕೇಂದ್ರ ಸರ್ಕಾರ ₹11,750 ಬೆಂಬಲ ಬೆಲೆ ನಿಗದಿ ಮಾಡಿದೆ. ಇದು ಅವೈಜ್ಞಾನಿಕ. ಸ್ವಾಮಿನಾಥನ್ ವರದಿಯಂತೆ ಉತ್ಪಾದನೆ ವೆಚ್ಚ ಮತ್ತು ಅರ್ಧದಷ್ಟು ಲಾಬಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದರು.

ADVERTISEMENT

ತೋಟಗಾರಿಕೆ ಇಲಾಖೆ ₹16,750 ಹಾಗೂ ರಾಜ್ಯದ ಕೃಷಿ ಬೆಲೆ ಆಯೋಗ ₹18 ಸಾವಿರ ಬೆಲೆ ನೀಡುವಂತೆ ವರದಿ ನೀಡಿದೆ. ತೆಂಗು ಬೆಳೆ ಹವಾಮಾನ ವೈಪರಿತ್ಯದಿಂದ ಅನೇಕ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತವಾಗಿದೆ. ರೈತರ ಜೀವನ ನಿರ್ವಹಣೆ ವೆಚ್ಚ ಹಾಗೂ ಉತ್ಪಾದನೆ ವೆಚ್ಚ ದುಬಾರಿಯಾಗಿರುವುದರಿಂದ ತೆಂಗು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ₹25 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ತೆಂಗು ಬೆಳೆಗಾರರ ಹಿತ ಕಾಯಬೇಕು ಎಂದರು.

ರೈತಸಂಘದ ಉಪಾಧ್ಯಕ್ಷ ಕುದುರೆಕುಂಟೆ ಲಕ್ಕಣ್ಣ, ಜುಂಜಣ್ಣ, ಪರಮೇಶ್, ಪ್ರಭುಸ್ವಾಮಿ, ಕೃಷ್ಣಪ್ಪ ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.