ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ನಗರದ ಬಿ.ಎಚ್. ರಸ್ತೆಯ ಸಿದ್ಧಗಂಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ ಸ್ಥಳಾಂತರಿಸಲಾಗಿದೆ.
ಸ್ವಾಮೀಜಿ ಭೇಟಿ ಮಾಡಲು ಪ್ರತಿ ದಿನ ಗಣ್ಯರು ಬರುವುದರಿಂದ ಚಿಕಿತ್ಸೆ ನೀಡಲು ಅಡಚಣೆ ಆಗುತ್ತಿರುವುದು, ಸೋಂಕು ತಗಲುವುದನ್ನು ತಡೆಯುವ ಉದ್ದೇಶದಿಂದ ಮಠದಿಂದ ಸಿದ್ಧಗಂಗಾ ಆಸ್ಪತ್ರೆಗೆ ಸ್ವಾಮೀಜಿ ಅವರನ್ನು ಸ್ಥಳಾಂತರ ಮಾಡಲಾಗಿದೆ.
ಸ್ವಾಮೀಜಿ ಆರೋಗ್ಯವಾಗಿಯೇ ಇದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಭಕ್ತರು ಆತಂಕ ಪಡಬೇಕಿಲ್ಲ:ಸಿದ್ಧಲಿಂಗಶ್ರೀ
ಮಠದಲ್ಲಿ ಎಷ್ಟೇ ಪ್ರಯತ್ನಿಸಿದರೂ ಗಣ್ಯರ ಭೇಟಿ ನಿಯಂತ್ರಣ ಕಷ್ಟವಾಯಿತು. ಅಲ್ಲದೇ ಸ್ವಾಮೀಜಿ ಅವರಿಗೆ ಹೆಚ್ಚಿನ ವಿಶ್ರಾಂತಿ ಮತ್ತು ಸೋಂಕಿಗೆ ಸಮರ್ಪಕ ಚಿಕಿತ್ಸೆಗಾಗಿಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಕ್ತರು ಆತಂಕ ಪಡಬೇಕಿಲ್ಲ ಎಂದು ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
‘ಆಸ್ಪತ್ರೆಯ 3 ಮಹಡಿಯ ತೀವ್ರ ನಿಗಾ ಘಟಕದಲ್ಲಿ ಸ್ವಾಮೀಜಿಯವರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಮೂರು ಬಾರಿ ಹೆಲ್ತ್ ಬುಲಿಟಿನ್ ಪ್ರಕಟಿಸಲಾಗುವುದು. ಜೊತೆಗೆ,ಗಣ್ಯರು, ಅತೀ ಗಣ್ಯರು ಸೇರಿದಂತೆ ಯಾರಿಗೂ ಸ್ವಾಮೀಜಿ ಭೇಟಿಗೆ ಅವಕಾಶವಿಲ್ಲ. ಸ್ವಾಮೀಜಿ ಅವರ ಆರೋಗ್ಯ ದೃಷ್ಟಿಯಿಂದ ಸಹಕರಿಸಬೇಕು. ಯಾರೂ ಅನ್ಯಥಾ ಭಾವಿಸಬಾರದು’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.