ತುಮಕೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹಾಗೂ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆ ಹಾಗೂ ಆಯುಷ್ ವೈದ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಶಿವಣ್ಣ ಪ್ರಶಂಸಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾಗೆ ಸಂಬಂಧಿಸಿದಂತೆ ಆಯುಷ್ ಇಲಾಖೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಜ್ಞ ಆಯುಷ್ ವೈದ್ಯರು ಸುಮಾರು ಔಷಧಿಗಳನ್ನು ಸಿದ್ಧಪಡಿಸಿದ್ದಾರೆ. ಔಷಧಿಗಳನ್ನು ರೋಗಿಗಳ ಮೇಲೆ ಪ್ರಯೋಗಿಸಿದ್ದು ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದರು.
‘ಶುಚಿ, ಬಿಸಿನೀರು ಸೇವನೆ, ಅಂತರ ಕಾಯ್ದುಕೊಳ್ಳುವುದರಿಂದ ರೋಗ ತಡೆಗಟ್ಟಬಹುದು. ಆಯುಷ್ಮಾನ್ ಭಾರತ ಯೋಜನೆಯ ಪೂರ್ಣ ಸದುಪಯೋಗ ಕೆಲವು ಪಟ್ಟಭದ್ರ ಶಕ್ತಿಗಳಿಂದ ಜನರಿಗೆ ದೊರೆಯದಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ದೂರಿದರು.
ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ರೋಗಿಗಳು ಗ್ರಾಮಾಂತರ ಪ್ರದೇಶದವರಾಗಿದ್ದಾರೆ. ರೈತರಾಗಿದ್ದಾರೆ. ಆದ್ದರಿಂದ ಜನೌಷಧಿಗಳನ್ನು ಉಪಯೋಗಿಸುವಂತೆ ಸರ್ಕಾರಿ ಮತ್ತು ಖಾಸಗಿ ವೈದ್ಯರು ರೋಗಿಗಳಿಗೆ ಸಲಹೆ, ಸೂಚನೆನೀಡಬೇಕು ಎಂದು ಕೋರುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.