
ತುಮಕೂರು: ಸಿದ್ದರಾಮೇಶ್ವರರು ಕೇವಲ ಒಬ್ಬ ವ್ಯಕ್ತಿಯಲ್ಲ, ಸಮಾಜ ರೂಪಿಸುವ ಶಕ್ತಿ. ಯುವ ಸಮೂಹ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಸಲಹೆ ಮಾಡಿದರು.
ನಗರದಲ್ಲಿ ಬುಧವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭೋವಿ ಸಮುದಾಯದ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಯಕವೇ ಕೈಲಾಸ ಎಂಬ ತತ್ವ ನಂಬಿದ್ದರು. ಶ್ರಮ, ನಿಷ್ಠೆ ಮತ್ತು ನೀತಿಯ ಮೂಲಕ ಸೊಲ್ಲಾಪುರವನ್ನು ಕೈಲಾಸದಂತೆ ರೂಪಿಸಿದರು. ಕಾಯಕ ನಂಬಿ ಸಾಗಿದರೆ ಸಮಾಜವನ್ನು ಹೇಗೆ ಉತ್ತಮ ದಿಕ್ಕಿನಲ್ಲಿ ಬದಲಾಯಿಸಬಹುದು ಎಂಬುದಕ್ಕೆ ಅವರು ಉದಾಹರಣೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಇಂದಿನ ಯುವ ಸಮೂಹಕ್ಕೆ ಸಿದ್ದರಾಮೇಶ್ವರರ ಬದುಕಿನ ಕುರಿತು ತಿಳಿಸಲು ಜಯಂತಿ ಆಚರಿಸಲಾಗುತ್ತಿದೆ. ಕೆರೆ, ಬಾವಿ, ಕಟ್ಟಡ, ಇತರೆ ಮೂಲಭೂತ ಸೌಕರ್ಯ ಕಲ್ಪಿಸಿ ತಮ್ಮ ಜೀವನವನ್ನು ಜನಸೇವೆಗೆ ಸಮರ್ಪಿಸಿದ್ದರು’ ಎಂದು ಸ್ಮರಿಸಿದರು.
ಭೋವಿ ಸಮುದಾಯದ ಮುಖಂಡರಾದ ಮಂಜುನಾಥ್, ಊರುಕೆರೆ ಉಮೇಶ್, ವಿಶ್ವನಾಥ್, ಪಿ.ಜಿ.ವೆಂಕಟಸ್ವಾಮಿ, ಎ.ಎಚ್.ಹನುಮಂತರಾಯಪ್ಪ, ಪುರುಷೋತ್ತಮ್, ಕಾಶಿನಾಥ್, ಗೋವಿಂದರಾಜು, ಗಿರಿಯಪ್ಪ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.