ADVERTISEMENT

ಸಿದ್ಧಗಂಗಾಮಠ: ಸ್ವಾಮೀಜಿ ಗದ್ದುಗೆ ಕೆಳಗಡೆ ನೂತನ ಧ್ಯಾನ ಮಂದಿರ ಉದ್ಘಾಟನೆ

ಶಿವಕುಮಾರ ಸ್ವಾಮೀಜಿ 5ನೇ ತಿಂಗಳ ಆರಾಧನಾ ದಿನ ಆರಂಭ, ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿ ಆರಾಧಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 14:41 IST
Last Updated 21 ಜೂನ್ 2019, 14:41 IST
ಧ್ಯಾನ ಮಂದಿರದಲ್ಲಿ ಸ್ವಾಮೀಜಿಯವರು ಧ್ಯಾನ ಮಾಡಿದರು
ಧ್ಯಾನ ಮಂದಿರದಲ್ಲಿ ಸ್ವಾಮೀಜಿಯವರು ಧ್ಯಾನ ಮಾಡಿದರು   

ತುಮಕೂರು: ಅಂತರರಾಷ್ಟ್ರೀಯ ಯೋಗ ದಿನ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಅವರ 5ನೇ ತಿಂಗಳ ಆರಾಧನೆ ದಿನವಾದ ಶುಕ್ರವಾರ ಸಿದ್ಧಗಂಗಾಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ಕೆಳಭಾಗದಲ್ಲಿ ಧ್ಯಾನ ಮಂದಿರವು ಉದ್ಘಾಟನೆಯಾಯಿತು.

ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ತೆರಳುತ್ತಿದ್ದ ಜನರಿಗೆ ಗದ್ದುಗೆ ದರ್ಶನ ಪಡೆದ ಬಳಿಕ ಆಸಕ್ತರಿಗೆ ಧ್ಯಾನ ಮಾಡಲು, ಸ್ವಾಮೀಜಿಯವರಲ್ಲಿ ಪ್ರಾರ್ಥಿಸಲು ಧ್ಯಾನ ಮಂದಿರ ರೂಪಿಸಲಾಗಿದೆ. ಧ್ಯಾನವು ಯೋಗದ ಒಂದು ಭಾಗವಾಗಿದ್ದರಿಂದ ಹಾಗೂ ಸ್ವಾಮೀಜಿಯವರ 5ನೇ ತಿಂಗಳ ಆರಾಧನೆ ಆಗಿದ್ದರಿಂದ ಈ ದಿನ ಧ್ಯಾನ ಮಂದಿರ ಉದ್ಘಾಟನೆ ಮಾಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಿಗ್ಗೆ ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿಯವರು ಧ್ಯಾನ ಮಂದಿರವನ್ನು ಉದ್ಘಾಟನೆ ಮಾಡಿದರು. ಸಿದ್ಧಗಂಗಾಮಠದ ಅಧ್ಯಕ್ಷರಾದ ಡಾ.ಸಿದ್ದಲಿಂಗ ಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೆಟ್ಟಹಳ್ಲಿ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಬೇಲಿಮಠದ ಶಿವರುದ್ರ ಸ್ವಾಮೀಜಿಯವರು ಶಿವಾನುಭವಗೋಷ್ಠಿ ನೆರವೇರಿಸಿದರು.

ADVERTISEMENT

ಧ್ಯಾನ ಮಂದಿರದ ವಿಶೇಷಗಳು

75 ಜನರು ಕುಳಿತು ಧ್ಯಾನ ಮಾಡಲು ಅವಕಾಶ. ಧ್ಯಾನ ಮಾಡಲು ನಿರ್ದಿಷ್ಟ ಸಂಖ್ಯೆಯ ತಂಡ ರಚನೆ ಮಾಡಿ ಒಳಗಡೆ ಬಿಡುವ ವ್ಯವಸ್ಥೆ, ಪ್ರತಿ ತಂಡಕ್ಕೆ 10 8 ನಿಮಿಷ ನಿಗದಿ ಮಾಡಲಾಗಿದೆ. 6 ನಿಮಿಷ ಧ್ಯಾನಕ್ಕೆ, 1 ನಿಮಿಷ ಒಳಗಡೆ ಹೋಗಲು, 1 ನಿಮಿಷ ಹೊರಗಡೆ ಬರುವುದಕ್ಕೆ ನಿಗದಿಪಡಿಸಲಾಗಿದೆ.

ಆಕರ್ಷಕ ಸ್ವಾಮೀಜಿ ಪುತ್ಥಳಿ: ಧ್ಯಾನ ಮಂದಿರದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಆಕರ್ಷಕ ಪುತ್ಥಳಿ ಇದೆ. ಈ ಪುತ್ಥಳಿಯನ್ನು ಬೆಂಗಳೂರಿನ ಕಲಾವಿದರಾ ಕೃಷ್ಣಾ ನಾಯಕ್ ಅವರು ದಾನವಾಗಿ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.