ತಿಪಟೂರು: ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿರುವ ರಾಜ್ಯ ಸರ್ಕಾರದ ವಿರುದ್ಧ ತಾಲ್ಲೂಕು ಬಿಜೆಪಿ ಘಟಕದಿಂದ ತಾಲ್ಲೂಕು ಆಸ್ಪತ್ರೆ ಎದುರು ಕಪ್ಪುಪಟ್ಟಿ ಪ್ರದರ್ಶಿಸಿ, ಮೌನ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ರಾಜ್ಯ ಸರ್ಕಾರ ಮೊದಲ ದಿನದಿಂದ ಜನವಿರೋಧಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಮಧ್ಯಮ ಹಾಗೂ ಬಡ ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ ರಾಜ್ಯ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಿಂದ ಕೇಂದ್ರಗಳನ್ನು ತೆಗೆದು ಜನವಿರೋಧಿ ಕೆಲಸ ಮಾಡಿದೆ ಎಂದು ದೂರಿದರು.
ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದ್ದು ಈಗಾಗಲೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕೆಟ್ಟ ನಿರ್ಧಾರಗಳನ್ನು ಸರ್ಕಾರ ಕೈ ಬಿಡಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರಸ್ತೆಗಿಳಿದು ಪತ್ರಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಜನವಿರೋಧಿ ಆಡಳಿತ ನೆಡೆಸುತ್ತಿದೆ. ಸರ್ಕಾರ ಆದೇಶ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಲಿಂಗರಾಜು, ಬಿಸಲೇಹಳ್ಳಿ ಜಗದೀಶ್, ಸಿಂಗ್ರಿ ದತ್ತಪ್ರಸಾದ್, ಆಯರಹಳ್ಳಿ ಶಂಕರಪ್ಪ, ನಗರಸಭಾ ಸದಸ್ಯರಾದ ಸಂಗಮೇಶ್, ಪದ್ಮತಿಮ್ಮೇಗೌಡ, ಜಯಲಕ್ಷ್ಮಿ, ಸಂದ್ಯಾಕಿರಣ್, ಮೋಹನ್ಕುಮಾರ್, ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ತರಕಾರಿ ಗಂಗಾಧರ್, ಲೋಕೇಶ್, ಕಾಡುಗೊಲ್ಲ ಸಮಾಜದ ತಾ.ಅಧ್ಯಕ್ಷ ಬಾಲರಾಜು, ದಿಲೀಪ್ ಸೂಗೂರು, ಜಗದೀಶ್, ಸತೀಶ್, ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.