ತುಮಕೂರು: ನಗರದ ಮಂಡಿಪೇಟೆಯಲ್ಲಿರುವ ಗಂಗಾಧರೇಶ್ವರ ಫರ್ಟಿಲೈಸರ್ಸ್ ಬಿತ್ತನೆ ಬೀಜ ಮಾರಾಟ ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ ನಕಲಿ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ಜಾಗೃತ ದಳದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಗಂಗಾಧರೇಶ್ವರ ಫರ್ಟಿಲೈಸರ್ಸ್ ಬಿತ್ತನೆ ಬೀಜ ಮಾರಾಟ ಮಳಿಗೆ ಮೇಲೆ ಗುರುವಾರ ದಾಳಿ ನಡೆಸಿ ಪರಿಶೀಲಿಸಿದ ಸಮಯದಲ್ಲಿ ಅಧಿಸೂಚಿತವಲ್ಲದ ಬಿತ್ತನೆ ಬೀಜದ ತಳಿಯನ್ನು ದಾಸ್ತಾನು ಮಾಡಿರುವುದು ಕಂಡುಬಂದಿದೆ. ಬೆಂಗಳೂರಿನ ಸೂರ್ಯೋದಯ ಸೀಡ್ಸ್ ಸಂಸ್ಥೆಯಿಂದ ₹10,500 ಮೌಲ್ಯದ 50 ಕೆ.ಜಿ ತೊಗರಿ ಬಿತ್ತನೆ ಬೀಜ (ಬಿಆರ್ಜಿ) ಖರೀದಿಸಿದ್ದು, ಮಾರಾಟದ ಸಲುವಾಗಿ ದಾಸ್ತಾನು ಮಾಡಿದ್ದರು. ಬಿತ್ತನೆ ಬೀಜದ ಪೊಟ್ಟಣದ ಮೇಲೆ ತಳಿಯ ಹೆಸರು ನಮೂದಿಸಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಮಾರಾಟ ಮಾಡುತ್ತಿದ್ದು, ಜಪ್ತಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ (ಜಾರಿದಳ) ವೈ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಗುಣಮಟ್ಟ ಪರೀಕ್ಷೆಗೆ ಬೀಜದ ಮಾದರಿ ಕಳುಹಿಸಲಾಗಿದೆ. ಬಿತ್ತನೆ ಬೀಜ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಪುಟ್ಟರಂಗಪ್ಪ, ಜಿಲ್ಲಾ ಯೋಜನಾ ಸಂಯೋಜಕ ಪ್ರವೀಣ್ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.