ADVERTISEMENT

ಶೀಘ್ರ ಒಳಚರಂಡಿ ಕಾಮಗಾರಿ ಆರಂಭ

ತುರುವೇಕೆರೆ: ಸಾಮಾನ್ಯ ಸಭೆಯಲ್ಲಿ ಶಾಸಕ ಮಸಾಲ ಜಯರಾಂ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 6:11 IST
Last Updated 25 ಡಿಸೆಂಬರ್ 2020, 6:11 IST
ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಅಂಜನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಮಸಾಲಜಯರಾಂ ಉಪಸ್ಥಿತರಿದ್ದರು
ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಅಂಜನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಮಸಾಲಜಯರಾಂ ಉಪಸ್ಥಿತರಿದ್ದರು   

ತುರುವೇಕೆರೆ: ಒಳ ಚರಂಡಿ ಕಾಮಗಾರಿ ಮುಗಿದು 13 ವರ್ಷಗಳೇ ಕಳೆದರೂ ಪಟ್ಟಣ ಪಂಚಾಯಿತಿ ಸುಪರ್ದಿಗೆ ನೀಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಶಾಸಕ ಮಸಾಲ ಜಯರಾಂ ಹೇಳಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಒಳ ಚರಂಡಿ ವ್ಯವಸ್ಥೆ ನಿರುಪಯುಕ್ತವಾಗಿದ್ದು, ಶ್ರೀಘ್ರ ಹೊಸ ಒಳ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಇದಕ್ಕೆ ಸದಸ್ಯ ಯಜಮಾನ್ ಮಹೇಶ್ ಧ್ವನಿಗೂಡಿಸಿದರು.

ADVERTISEMENT

2020-21ನೇ ಸಾಲಿನ ಸಂತೆ ಶುಲ್ಕ ಸಂಗ್ರಹ ಸಂಬಂಧಿಸಿದಂತೆ ಸದಸ್ಯ ಎನ್.ಆರ್.ಸುರೇಶ್ ಮಾತನಾಡಿ, ‘ಈ ಹಿಂದೆ ಸುಂಕ ವಸೂಲಿ ಗುತ್ತಿಗೆ ಪಡೆದಿದ್ದ ಇಬ್ಬರು ₹ 4 ಲಕ್ಷವನ್ನು ಪಟ್ಟಣ ಪಂಚಾಯಿತಿಗೆ ನೀಡಬೇಕಿದೆ ಇವರಿಂದ ಹಣ ವಸೂಲಿ ಮಾಡಲು ಯಾವ
ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

ಮುಖ್ಯಾಧಿಕಾರಿ ಮಂಜುಳಾದೇವಿ ಪ್ರತಿಕ್ರಿಯಿಸಿ, ‘ಹಣ ವಸೂಲಿ ಮಾಡಲು ಈಗಾಗಲೇ ಅವರಿಗೆ ನೋಟಿಸ್‌ ನೀಡಲಾಗಿದೆ’ ಎಂದರು. ‌

ಸದಸ್ಯ ನದಿಂ ಮಾತನಾಡಿ, ‘ಎನ್‌ಒಸಿ ಕೊಡಿ ಎಂದರೆ ₹500 ಕಟ್ಟಿ ರಶೀದಿ ತನ್ನಿ ಎಂದು ಹೇಳುವ ಅಧಿಕಾರಿಗಳು ಲಕ್ಷಾಂತರ ವ್ಯವಹಾರ ಮಾಡಲು ಯಾವ ಭದ್ರತೆ ನೀಡಿಲ್ಲ. ಕೂಡಲೇ ಕಾನೂನು ಕ್ರಮ ಕೈಗೊಂಡು ಹಣ ವಸೂಲಿ ಮಾಡಬೇಕು’ ಎಂದು ಸೂಚಿಸಿದರು.

ಕೋಳಿ ಕಸದ ಹಣ ಎಲ್ಲಿ: ಪಟ್ಟಣದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಿವೆ. ಕೋಳಿಯ ಕಸ ವಿಲೇವಾರಿಗೆ ಪಟ್ಟಣ ಪಂಚಾಯಿತಿ ವಾಹನ ತೆರಳುತ್ತಿದ್ದು ಪ್ರತಿ ಕೋಳಿ ಅಂಗಡಿಯಿಂದ ತಿಂಗಳಿಗೆ ಇಷ್ಟು ಹಣ ನೀಡಬೇಕು ಎಂದು ಅಕ್ರಮವಾಗಿ ನಿಗದಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿಗೆ ತಿಂಗಳಿಗೆ ₹ 30ರಿಂದ ₹40 ಸಾವಿರ ನಷ್ಟವಾಗುತ್ತಿದೆ. ಕಳೆದ 2 ವರ್ಷಗಳಿಂದ ಲಕ್ಷಾಂತರ ಆದಾಯ ಕೊರತೆ ಆಗಿದೆ. ಕೂಡಲೇ ಸರಿಪಡಿಸಿ ಪಂಚಾಯಿತಿಗೆ ಆದಾಯ ಬರುವಂತೆ ಕ್ರಮಕೈಗೊಳ್ಳಿ’ ಎಂದು ಶಾಸಕರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರಾದ ಚಿದಾನಂದ, ರವಿ, ಆಶಾರಾಣಿ, ಮಧು, ಟಿ.ಕೆ.ಪ್ರಭಕರ್ ಸೌಭಾಗ್ಯ, ಶೀಲಾ, ಸ್ವಪ್ನ, ಮೇಘನಾ, ಜಯಮ್ಮ, ಎಂಜಿನಿಯರ್ ಸತ್ಯನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.