ADVERTISEMENT

ಅ.1ರಂದು ‘ಸಹಜ ಸತ್ಯಾಗ್ರಹ’ ಸಮಾವೇಶ

ವಿವಿಧ ಜಿಲ್ಲೆಗಳಿಂದ ಸಹಜ ಬೇಸಾಯ ಆಸಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:15 IST
Last Updated 29 ಸೆಪ್ಟೆಂಬರ್ 2020, 8:15 IST

ತುಮಕೂರು: ನಗರದ ವಿಜ್ಞಾನ ಕೇಂದ್ರದ ಸರ್ ಎಂ.ವಿ. ಸಭಾಂಗಣದಲ್ಲಿ ಅ. 1ರಂದು ಬೆಳಿಗ್ಗೆ 10.30ರಿಂದ ಸಂಜೆ 4ರ ವರೆಗೆ ಸಹಜ ಬೇಸಾಯ ಶಾಲೆ ಮತ್ತು ತುಮಕೂರು ವಿಜ್ಞಾನ ಕೇಂದ್ರವು ‘ಸಹಜ ಸತ್ಯಾಗ್ರಹ’ ರಾಜ್ಯ ಸಮಾವೇಶ ಹಮ್ಮಿಕೊಂಡಿವೆ.

‘ಗ್ರಾಮ ಸ್ವರಾಜ್ಯ, ಜಲಸ್ವರಾಜ್ಯಕ್ಕಾಗಿ ಆಸಕ್ತ ರೈತರನ್ನು ಸಹಜ ಬೇಸಾಯದಲ್ಲಿ ತೊಡಗಿಸಿ ಪ್ರೋತ್ಸಾಹಿಸುವ ಗುರಿಯನ್ನು ಈ ಸತ್ಯಾಗ್ರಹ ಹೊಂದಿದೆ. ಅಕ್ಟೋಬರ್‌ನಿಂದ ಆರಂಭವಾಗುವ ಸತ್ಯಾಗ್ರಹ ಒಂದು ವರ್ಷಗಳ ಕಾಲ ರಾಜ್ಯದಾದ್ಯಂತ ನಡೆಯಲಿದೆ’ ಎಂದು ಸಹಜ ಬೇಸಾಯ ಶಾಲೆ ಕಾರ್ಯದರ್ಶಿ ಸಿ.ಯತಿರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದ ಹತ್ತು ಕೃಷಿ ಜೀವ ಪರಿಸರ ವಲಯಗಳಲ್ಲೂ ಸತ್ಯಾಗ್ರಹ ನಡೆಸಲಾಗುವುದು. ಸಹಜ ಬೇಸಾಯ ಶಾಲೆ ಈಗಾಗಲೇ ಸಹಜ ಬೇಸಾಯ ನೀತಿ ರೂಪಿಸಿದೆ. ಈ ಬಗ್ಗೆ ರೈತರು, ಗ್ರಾಹಕರು, ಕೃಷಿ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಆಸಕ್ತ ಸಂಘ ಸಂಸ್ಥೆಗಳ ಸಹಕಾರದಲ್ಲಿ ವ್ಯಾಪಕ ಜನಜಾಗೃತಿ, ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು. ಇದು ಒಂದು ರೀತಿಯ ಜನಚಳವಳಿ ಆಗಿದೆ ಎಂದು ವಿವರಿಸಿದರು.

ADVERTISEMENT

ಗ್ರಾಮೋದ್ಯೋಗಗಳನ್ನು ಪುನಶ್ಚೇತನಗೊಳಿಸಿ ವಿಕೇಂದ್ರಿಕೃತ ಗ್ರಾಮ ಸ್ವರಾಜ್ಯ ಸ್ಥಾಪಿಸಬಯಸುವ ಎರಡನೇ ಸ್ವಾತಂತ್ರ್ಯ ಚಳವಳಿಯನ್ನಾಗಿ ಸತ್ಯಾಗ್ರಹವನ್ನು ರೂಪಿಸುವ ಆಶಯ ಹೊಂದಲಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳ ಸಹಜ ಬೇಸಾಯ ಆಸಕ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇವರು ಮುಂದಿನ ದಿನಗಳಲ್ಲಿ ತಮ್ಮ ಹಳ್ಳಿಗಳಲ್ಲಿ ಸತ್ಯಾಗ್ರಹದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವರು. ಸಹಜ ಬೇಸಾಯ ನೀತಿ ಜಾರಿಗಾಗಿ ಸ್ಥಳೀಯ ಗ್ರಾಮ ಸಭೆ ಮತ್ತು ಪಂಚಾಯಿತಿ ಮೂಲಕ ಸರ್ಕಾರವನ್ನು ಒತ್ತಾಯಿಸುವರು ಎಂದು ಹೇಳಿದರು.

ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಕಾರ್ಯದರ್ಶಿ ಎಸ್‌.ರವಿಶಂಕರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು, ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್ ಗೋಷ್ಠಿಯಲ್ಲಿ ಇದ್ದರು.

ಮಾಹಿತಿಗೆ ಡಾ.ಮಂಜುನಾಥ್ 9632226229 ಅಥವ ಸಿ.ಯತಿರಾಜು 9632670108 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.