ತುಮಕೂರು: ‘ಮೈತ್ರಿ ಸರ್ಕಾರದ ಕುರಿತು ಎಂ.ವೀರಪ್ಪ ಮೊಯಿಲಿ ಅವರು ನೀಡಿರುವ ಹೇಳಿಕೆ ವೈಯಕ್ತಿಕವಾದುದು. ಅವರು ಲೋಕಸಭಾ ಚುನಾವಣೆಯಲ್ಲಿ ಸೋತ್ತಿದ್ದು, ಆ ಕಾರಣಕ್ಕೆ ಈ ರೀತಿ ಹೇಳಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ಕೊರಟಗೆರೆ ತಾಲ್ಲೂಕು ತೋವಿನಕೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಪ್ಪ ಮೊಯಿಲಿ ಅವರ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಸರ್ಕಾರದ ಆಡಳಿತದ ಬಗ್ಗೆ ಅಥವಾ ಮಧ್ಯಂತರ ಚುನಾವಣೆ ಬಗ್ಗೆ ಯಾರೇ ಹೇಳಿಕೆ ನೀಡಿದರೂ ಅದು ಅವರ ವೈಯಕ್ತಿಕ ಅಷ್ಟೇ’ ಎಂದರು.
‘ವೈಯಕ್ತಿಕ ಹೇಳಿಕೆಗಳೇ ಮೈತ್ರಿ ಪಕ್ಷಗಳ ತೀರ್ಮಾನವಾಗಲು ಸಾಧ್ಯವಿಲ್ಲ. ದೇವೇಗೌಡರು ಮತ್ತು ರಾಹುಲ್ ಗಾಂಧಿ ಅವರ ಜತೆ ಚರ್ಚಿಸಿ ಹೇಳಿಕೆ ನೀಡಿದರೆ ಮಾತ್ರ ಅದು ಮುಖ್ಯವಾಗುತ್ತದೆ’ ಎಂದು ತಿಳಿಸಿದರು.
‘ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯ ಬಗ್ಗೆ ಬಹಳ ಚಿಂತಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿದ ನೀರು ಸಮುದ್ರಕ್ಕೆ ಸೇರುತ್ತಿತ್ತು. ಆ ನೀರಿನಲ್ಲಿ 10 ಟಿಎಂಸಿ ಅಡಿ ನೀರನ್ನು ಪರಿಸರಕ್ಕೆ ಹಾನಿಯಾಗದಂತೆ ಬೆಂಗಳೂರಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ’ ಎಂದರು.
‘ಬೆಂಗಳೂರು ನೀರಿನ ಸಮಸ್ಯೆ ಪರಿಹಾರಕ್ಕೆ ಬೆಂಗಳೂರು ಸುತ್ತಮುತ್ತಲೇ ಪರಿಹಾರ ದೊರೆತಿದ್ದರೆ ಅಷ್ಟು ದೂರದಿಂದ ನೀರು ತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿರಲಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.