ಮಧುಗಿರಿ: ತಾಲ್ಲೂಕು ಪುರವರ ಹೋಬಳಿಯ ಗೋವಿಂದನಹಳ್ಳಿಯಲ್ಲಿ 5ನೇ ತರಗತಿ ವಿದ್ಯಾರ್ಥಿ ಜಿ.ಎನ್. ನವೀನ್ (11) ಕುಸಿದು ಬಿದ್ದು ಮೃತಪಟ್ಟಿದೆ.
ಮೃತ ನವೀನ್ ನರೇಂದ್ರ ಕುಮಾರ್ ಹಾಗೂ ರಾಧಮಣಿ ದಂಪತಿಯ ಪುತ್ರ. ಆತ ಮಧುಗಿರಿಯಚೇತನ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಾನೆ. ಶಾಲೆಯಿಂದ ಮೆನೆಗೆ ಹೋದ ಮಗು ತಾಯಿಯ ಬಳಿ ಕುಡಿಯಲು ನೀರು ಕೇಳಿದೆ. ನೀರು ಕುಡಿಸುವಷ್ಟರಲ್ಲಿ ಕುಸಿದು ಬಿದ್ದಿದೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗು ಮೃತಪಟ್ಟಿತ್ತು.
‘ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ನೀಡಿದ ಡಿ.ಟಿ. ಚುಚ್ಚುಮದ್ದಿನಿಂದ ಮಗ ಮೃತಪಟ್ಟಿದ್ದಾನೆ’ ಎಂದು ಪೋಷಕರು ದೂರಿದ್ದಾರೆ.
ಪೋಷಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಪ್ರವೀಣ್, ಸಿಪಿಐ ದಯಾನಂದ ಜಿ. ಶೇಗುಣಸಿ, ಪಿಎಸ್ಐ ಕಾಂತರಾಜು, ಬಿಇಒ ರಂಗಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಚಿಕ್ಕಮಾಲೂರು ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಶಿಕ್ಷಕರಾದ ನರಸೇಗೌಡ, ಎಸ್.ವಿ.ರಮೇಶ್, ಚಂದ್ರಮೌಳಿ, ಬಸವರಾಜು, ಡಿಡಿಪಿಐ ರೇವಣಸಿದ್ದಪ್ಪ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.