ಗುಬ್ಬಿ: ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಪಟ್ಟಣದಲ್ಲಿರುವ ಸರ್ಕಾರಿಸ್ವಾಯತ್ತ ಪದವಿ ಕಾಲೇಜು ಜಲಾವೃತಗೊಂಡು ತರಗತಿ ಕೊಠಡಿಗಳಿಗೆ ನೀರು ನುಗ್ಗಿದ್ದರಿಂದ ತರಗತಿ ನಡೆಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮಳೆ ನಿಂತಿದ್ದರೂ ತಿಂಗಳಾನುಗಟ್ಟಲೆ ಕಾಲೇಜು ಒಳ ಹಾಗೂ ಹೊರ ಆವರಣದಲ್ಲಿ ನೀರು ನಿಂತಿರುವುದರಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.
ಈಗಾಗಲೇ ನಿಂತಿರುವ ನೀರು ವಾಸನೆ ಬರುತ್ತಿದೆ. ವಿದ್ಯಾರ್ಥಿಗಳು ಕೊಳಕು ವಾಸನೆಯಲ್ಲಿಯೇ ಪಾಠ ಕೇಳುವಂತಾಗಿದೆ. ಜತೆಗೆ ಸೊಳ್ಳೆಗಳ ಅವಾಸಸ್ಥಾನವಾಗುತ್ತಿದ್ದು
ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಕಾಲೇಜು ಕಟ್ಟಡದ ತಳಪಾಯಕ್ಕೆ ನೀರು ಹೋಗಿ ಹಾನಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಾಲೇಜಿನಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕಾಲೇಜು ಸ್ಥಾಪನೆಗೊಂಡು ದಶಕಗಳೇ ಉರುಳಿದರೂ ಜನಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವ ಕಡೆ ಗಮನ ಹರಿಸದಿರುವುದು ವಿಷಾದನೀಯ. ಶಾಸಕರೇ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರೂ ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಬದ್ಧತೆ ತೋರದೆ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಲೇಜು ತುಂಬಾ ತಗ್ಗಿನ ಪ್ರದೇಶದಲ್ಲಿರುವುದರಿಂದ ದಿಣ್ಣೆಯ ನೀರು ಸಹಜವಾಗಿ ಕಾಲೇಜಿನ ಆವರಣದಲ್ಲಿ ಬಂದು ನಿಲ್ಲುತ್ತಿದೆ. ದಿಣ್ಣೆಯ ನೀರನ್ನು ಬೇರೆ ಕಡೆ ಹರಿಯುವಂತೆ ಮಾಡಿದರೆ ಅನುಕೂಲವಾಗುತ್ತದೆ. ಈ ವಿಷಯವನ್ನು ಶಾಸಕ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಗಮನಕ್ಕೂ ತರಲಾಗಿದೆ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲ ಡಾ. ವೆಂಕಟಾಚಲಯ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.