ADVERTISEMENT

ಜ.8, 9ರ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ

ಜಿಲ್ಲೆಯಲ್ಲಿ ರೈತ ಕಾರ್ಮಿಕರ ಬೃಹತ್‌ ಪ್ರತಿಭಟನಾ ಮೆರವಣಿಗೆ– ಪತ್ರಿಕಾಗೋಷ್ಠಿಯಲ್ಲಿ ಸೈಯದ್‌ ಮುಜೀಬ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 15:58 IST
Last Updated 3 ಜನವರಿ 2019, 15:58 IST
ಗಿರೀಶ್‌, ಸೈಯದ್‌ ಮುಜೀಬ್
ಗಿರೀಶ್‌, ಸೈಯದ್‌ ಮುಜೀಬ್   

ತುಮಕೂರು: ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ ಹಾಗೂ ಜನಪರ ನೀತಿಗಳ ಜಾರಿಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಜ.8 ಮತ್ತು 9ರಂದು ನಡೆಯುವ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ನಗರದ ವಿವಿಧ ಸಂಘಟನೆಗಳು ಬೆಂಬಲಿಸಲಿವೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಷ್ಕರದ ಭಾಗವಾಗಿ ಮಂಗಳವಾರ ಬೆಳಿಗ್ಗೆ 10ಕ್ಕೆ ನಗರದ ಟೌನ್‌ಹಾಲ್‌ ವೃತ್ತದಲ್ಲಿ ರೈತ ಕಾರ್ಮಿಕರ ಬೃಹತ್‌ ಪ್ರತಿಭಟನಾ ಮೆರವಣಿಗೆ, ರಸ್ತೆ, ಧರಣಿ, ಹರತಾಳಗಳನ್ನು ಆಚರಿಸಲಾಗುವುದು. ಹಾಗೇ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ರೈತ- ಕಾರ್ಮಿಕರ ಹಾಗೂ ಸಾಮಾನ್ಯರ ಬದುಕಿನ ಪ್ರಶ್ನೆಗಳ ಆಧಾರದಲ್ಲಿ ನಡೆಯುತ್ತಿರುವ ಈ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲೆಯ ಎಲ್ಲಾ ಜನ, ಸಂಘ-ಸಂಸ್ಥೆಗಳು, ವ್ಯಾಪಾರಿಗಳು, ವರ್ತಕರು, ರೈತರಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಜೀವಪರ ಸಂಘಟನೆಗಳು ಮತ್ತು ಜಾತ್ಯತೀತ ದೇಶಪ್ರೇಮಿ ರಾಜಕೀಯ ಪಕ್ಷಗಳು ಬೆಂಬಲಿಸುವಂತೆ ಮನವಿ ಮಾಡಿದರು.

ADVERTISEMENT

ಐಟಕ್‌ ಸಂಘಟನೆಯ ಎನ್.ಎಸ್.ಸ್ವಾಮಿದೇಶದಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದು, ಕೇಂದ್ರ ಸರ್ಕಾರವು ಕಾರ್ಪೊರೇಟ್‌ ಕಂಪನಿಗಳ ಲಕ್ಷಾಂತರ ಕೋಟಿ ಸಾಲಮನ್ನಾ ಮಾಡಲು ಮುಂದಾಗಿದೆ. ಆದರೆ ರೈತರ ಸಾಲಮನ್ನಾ ಮಾಡಲು ಹಲವಾರು ಕಾರಣಗಳನ್ನು ನೀಡುವುದು ಶೋಚನೀಯ ಎಂದು ಹೇಳಿದರು.

ಇಂದು ಕಾರ್ಮಿಕರ ಕಲ್ಯಾಣ ನಿಧಿಯನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಲ್ಲಿಸಬೇಕು. ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ ಉದ್ಯೋಗಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಜೀವ ವಿಮಾ ನೌಕರರ ಸಂಘದ ನಂಜುಂಡಸ್ವಾಮಿ, ಬಿಎಸ್‌ಎನ್‌ಎಲ್‌ ನೌಕರರ ಸಂಘದ ನರೇಶ್‌ ರೆಡ್ಡಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.