ADVERTISEMENT

ಸದೃಢ ಆರೋಗ್ಯ: ಯುವಜನರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 5:28 IST
Last Updated 26 ಏಪ್ರಿಲ್ 2022, 5:28 IST
ಆರೋಗ್ಯ ಮೇಳದಲ್ಲಿ ನೇತ್ರ ದಾನಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೆಸರು ನೋಂದಣಿ ಮಾಡಿಸಿದರು. ಅಧಿಕಾರಿಗಳು ಹಾಜರಿದ್ದರು
ಆರೋಗ್ಯ ಮೇಳದಲ್ಲಿ ನೇತ್ರ ದಾನಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೆಸರು ನೋಂದಣಿ ಮಾಡಿಸಿದರು. ಅಧಿಕಾರಿಗಳು ಹಾಜರಿದ್ದರು   

ತಿಪಟೂರು: ‘ಪ್ರಪಂಚವೇ ಕೊರೊನಾ ಕಾಲಘಟ್ಟದಲ್ಲಿ ನರಳಿದೆ. ಮೋದಿ ಅವರ ಬೆಂಬಲದಿಂದ ವಿಜ್ಞಾನಿಗಳು ಲಸಿಕೆ ಕಂಡುಹಿಡಿದು ಇಡೀ ವಿಶ್ವಕ್ಕೆ ಲಸಿಕೆ ನೀಡುವಂತಹ ಕಾರ್ಯ ಮಾಡಿದ್ದಾರೆ’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ನಡೆದ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಮತ್ತು ಕೊರೊನಾ ವಾರಿಯರ್ಸ್‍ಗಳ ಸಹಕಾರದಿಂದ ಮೂರನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಎರಡನೇ ಅಲೆಯಲ್ಲಿ ಕೆಲವು ರಾಜಕೀಯ ವಿರೋಧಿಗಳು ಜನರನ್ನು ದಿಕ್ಕುತಪ್ಪಿಸಿದರು. ಇದರಿಂದ ಲಸಿಕೆ ಪಡೆಯದೆ ಸಾವು, ನೋವು ಸಂಭವಿಸಿದವು. ಇದೆಲ್ಲವೂ ಭಾರತದ ಆರ್ಥಿಕತೆಯನ್ನು ಹಾಳು ಮಾಡಲು ಮಾಡಿರುವ ಸಂಚು ಆಗಿದೆ ಎಂದು ಟೀಕಿಸಿದರು.

ADVERTISEMENT

ಚಿಕ್ಕವಯಸ್ಸಿಗೆ ಮಧುಮೇಹ, ರಕ್ತದೊತ್ತಡ, ಹೃದಯಾಘಾತದಿಂದ ಯುವಜನತೆ ಆರೋಗ್ಯ ವ್ಯತ್ಯಯಕ್ಕೆ ಗುರಿಯಾಗುತ್ತಿದ್ದಾರೆ. ಯುವಜನತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕಾಗಿದೆ. ಇಂತಹ ಆರೋಗ್ಯ ಶಿಬಿರಗಳ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮೇಳದಲ್ಲಿ ನೇತ್ರ ದಾನಕ್ಕೆ ಸಚಿವ ನಾಗೇಶ್ ಹೆಸರು ನೋಂದಣಿ ಮಾಡಿಸಿದರು. ಇವರೊಂದಿಗೆ ತಹಶೀಲ್ದಾರ್ ಆರ್.ಜೆ. ಚಂದ್ರಶೇಖರ್, ತಾ.ಪಂ. ಇಒ ಸುದರ್ಶನ್, ನಗರಸಭೆ ಪೌರಾಯುಕ್ತ ಉಮಾಕಾಂತ್ ನೋಂದಣಿ ಮಾಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಕುಮಾರ್, ಡಾ.ರಕ್ಷಿತ್, ಡಾ.ಸುರೇಶ್, ಡಿವೈಎಸ್‍ಪಿ ಸಿದ್ಧಾರ್ಥ ಗೋಯಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.