ಕೊರಟಗೆರೆ: ಸುವರ್ಣಮುಖಿ ನದಿ ತಟದಲ್ಲಿ ದಿನನಿತ್ಯ ಪಟ್ಟಣದ ತ್ಯಾಜ್ಯ ಸುರಿಯಲಾಗುತ್ತಿದೆ. ಈಚೆಗೆ ಸುರಿದ ಮಳೆಯಿಂದಾಗಿ ಜೀವತಾಳಿ ಹರಿಯುತ್ತಿರುವ ನದಿ ದಿನೇ ದಿನೇ ಕಲುಷಿತಗೊಳ್ಳುತ್ತಿದೆ.
ತಾಲ್ಲೂಕಿನ ಪ್ರಮುಖ ನದಿಗಳಲ್ಲಿ ಒಂದಾದ ಸುವರ್ಣಮುಖಿ ನದಿ ಸಿದ್ಧರಬೆಟ್ಟದ ತಪ್ಪಲಿನಲ್ಲಿ ಹುಟ್ಟಿ ಪಟ್ಟಣದ ಮುಖಾಂತರ ಹಾದು ಹೋಗುತ್ತದೆ. ಈ ನದಿ ಮುಂದೆ ತಾಲ್ಲೂಕಿನ ಇತರ ನದಿಗಳಾದ ಜಯಮಂಗಲಿ, ಗರುಡಾಚಲ ನದಿಯಲ್ಲಿ ಸಂಗಮವಾಗುತ್ತದೆ. 2022 ಹಾಗೂ 2014ರಲ್ಲಿ ಉತ್ತಮ ಮಳೆಯಾದ ಕಾರಣ ಮೂರು ನದಿಗಳು ಸುಮಾರು 30 ವರ್ಷದ ನಂತರ ತುಂಬಿ ಹರಿದವು. ಈಗಲೂ ಈ ಮೂರು ನದಿಗಳಲ್ಲಿ ಸಣ್ಣದಾಗಿ ನೀರು ಹರಿಯುತ್ತಲಿದೆ.
ಸುವರ್ಣಮುಖಿ ನದಿ ಪಟ್ಟಣಕ್ಕೆ ನೀರುಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಜಂಪೇನಹಳ್ಳಿ ಕೆರೆ ಹಾಗೂ ನದಿ ಅಸುಪಾಸಿನಲ್ಲಿ ಪಟ್ಟಣಕ್ಕೆ ನೀರೊದಗಿಸುವ ಸಲುವಾಗಿ ಕೊಳವೆ ಬಾವಿ ಕೊರೆಸಿ ಅದರಿಂದ ನೀರು ಪೂರೈಸಲಾಗುತ್ತಿದೆ. ನದಿ ಈಗ ನಿರಂತರವಾಗಿ ಹರಿಯುತ್ತಿರುವುದರಿಂದ ಈ ಕೊಳವೆ ಬಾವಿಯಿಂದ ನೀರು ನಿರಂತರವಾಗಿ ಪೂರೈಕೆಯಾಗುತ್ತಿದೆ. ಇಂತಹ ನೀರುಣಿಸುವ ನದಿ ಈಗ ದಿನೇ ದಿನೇ ಕಲುಷಿತಗೊಳ್ಳುತ್ತಿದೆ.
ಪ್ಲಾಸ್ಟಿಕ್, ರಬ್ಬರ್ ಹಾಗೂ ಇತರ ಕೊಳೆಯಾದ ತ್ಯಾಜ್ಯವನ್ನು ನದಿ ಒಡಲಿಗೆ ದಿನನಿತ್ಯ ತಂದು ಸುರಿಯಲಾಗುತ್ತಿದೆ. ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ, ಕನಕ ವೃತ್ತದ ಸಮೀಪ ಬೆಂಗಳೂರು ರಸ್ತೆಗೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ತ್ಯಾಜ್ಯದ ರಾಶಿ ತಂದು ಸುರಿಯಲಾಗಿದೆ. ಇದಲ್ಲದೇ ಮಲ್ಲೇಶಪುರ ರಸ್ತೆ, ಬೋಡಬಂಡೇನಹಳ್ಳಿ ರಸ್ತೆಯಲ್ಲೂ ತ್ಯಾಜ್ಯವನ್ನು ರಸ್ತೆಗೆ ತಂದು ಸುರಿಯಲಾಗುತ್ತಿದೆ. ಮಲ್ಲೇಶಪುರ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಪ್ರತಿನಿತ್ಯ ಲೋಡ್ ಗಟ್ಟಲೇ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಹರಿಯುವ ನದಿಗೆ ತಂದು ಸುರಿಯಲಾಗುತ್ತಿದೆ.
ಇದರಿಂದ ಹಂದಿ, ನಾಯಿಗಳ ಕಾಟ ಕೂಡ ಈ ಭಾಗದಲ್ಲಿ ಹೆಚ್ಚಾಗಿದೆ. ಜತೆಗೆ ತ್ಯಾಜ್ಯದಿಂದ ದುರ್ವಾಸನೆ ಬೀರುವುದರ ಜತೆಗೆ ನದಿ ನೀರು ಕಲುಷಿತವಾಗಿ ಮಲೀನವಾಗುತ್ತಿದೆ. ಪಟ್ಟಣದ ಜನರ ಆರೋಗ್ಯದ ಮೇಲೆ ಯಾವ ತರಹದ ದುಷ್ಪರಿಣಾಮ ಬೇಕಾದರೂ ಬೀಳುವ ಆತಂಕ ಇದೆ.
ನದಿ ತಟ ಸೇರಿದಂತೆ ನದಿ ಒಡಲಿಗೆ ದಿನನಿತ್ಯ ರಾಶಿಗಟ್ಟಲೇ ತ್ಯಾಜ್ಯ ಸುರಿಯುತ್ತಿದ್ದರೂ ಪಟ್ಟಣ ಪಂಚಾಯಿತಿ ಮಾತ್ರ ಇತ್ತ ತಿರುಗಿಯೂ ನೋಡದೇ ಮೌನ ವಹಿಸಿದೆ. ಜನರು ನಿತ್ಯ ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ, ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಪರಸರ ವಾದಿಗಳು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಲುಷಿತ ನೀರು ಕೊಳೆತ ಸ್ಥಿತಿಯಲ್ಲಿ ಹಿಂಗುವುದರಿಂದ ನದಿಗೆ ಹೊಂದಿಕೊಂಡಂತೆ ಇರುವ ಪಟ್ಟಣಕ್ಕೆ ನೀರುಣಿಸುವ ಕೊಳವೆ ಬಾವಿ ನೀರು ಕಲುಷಿತಗೊಳ್ಳಲಿದೆ. ಇದು ಇಡೀ ಪಟ್ಟಣದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಪಟ್ಟಣದ ಚರಂಡಿ ನೀರು, ಜತೆಗೆ ಕೆಲವೆಡೆ ಶೌಚಾಲಯ ನೀರು ಕೂಡ ಚರಂಡಿ ಮೂಲಕ ನದಿ ಒಡಲಿಗೆ ಬಿಡಲಾಗಿದೆ. ಇದು ಕಣ್ಣಿಗೆ ಕಾಣುವಂತೆ ನಡೆಯುತ್ತಿದ್ದರೂ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶೌಚಾಲಯ ನೀರು, ಚರಂಡಿ ನೀರು ಹೀಗೆ ನದಿಗೆ ಸೇರುತ್ತಿದ್ದರೆ ಕೊರಟಗೆರೆ ಪಟ್ಟಣ ಕೆಲವೇ ದಿನಗಳಲ್ಲಿ ಕಲುಷಿತ ಪಟ್ಟಣವಾಗಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಲ್ಲೇಶಪುರ ಕೆರೆಗೆ ಬೆಂಗಳೂರು-ಕೊರಟಗೆರೆ ರಸ್ತೆಯಲ್ಲಿರುವ ಖಾಸಗಿ ಕಾರ್ಖಾನೆಯೊಂದರ ತ್ಯಾಜ್ಯ ನೀರು ಕೂಡ ಹಳ್ಳದ ಮೂಲಕ ಹರಿ ಬಿಡಲಾಗಿದೆ. ಈ ಕೆರೆ ನೀರು ಕೂಡ ಸುವರ್ಣಮುಖಿ ನದಿ ಸೇರುವುದರಿಂದ ಸುತ್ತಮುತ್ತಲ ಪರಿಸರ ಇನ್ನಷ್ಟು ಹಾಳಾಗುವ ಅಪಾಯವೂ ಎದುರಾಗಿದೆ.
ಕೆರೆಗಳ ರಕ್ಷಣೆ ನಾಗರಿಕರ ಹೊಣೆ
ನಮ್ಮ ಭಾಗದಲ್ಲಿ ಮಳೆ ಕಡಿಮೆ. ಮೂವತ್ತು ವರ್ಷಗಳ ನಂತರ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಈಗ ನದಿಗಳು ಜೀವ ತಳೆದಿವೆ. ಇವುಗಳ ಸಂರಕ್ಷಣೆ ಮಾಡಿಕೊಳ್ಳಬೇಕಿರುವುದು ನಮ್ಮ ಹೊಣೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಷ್ಟೊಂದು ಕಲುಷಿತವಾಗುತ್ತಿದ್ದರೂ ಜಾಣ ಕುರುಡರಾಗಿದ್ದಾರೆ. -ರಾಘವೇಂದ್ರ ಪಟ್ಟಣ ವಾಸಿ
ಪಟ್ಟಣ ಅನಾರೋಗ್ಯ ಪೀಡಿತ
ನದಿಗೆ ಕಸ ಸುರಿಯುವದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಹಾದು ಹೋಗಿರುವ ಸುವರ್ಣಮುಖಿ ನದಿ ಕಲುಷಿತವಾದರೆ ಇಡೀ ಪಟ್ಟಣ ಅನಾರೋಗ್ಯ ಪೀಡಿತವಾಗಲಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು.
-ಪ್ರಭಾಕರ ಯುವ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.