ADVERTISEMENT

ನಮ್ಮೂರಿಗೆ ಕ್ರಷರ್‌ ಬೇಡ ಸ್ವಾಮಿ

ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:22 IST
Last Updated 6 ಫೆಬ್ರುವರಿ 2020, 15:22 IST
ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರು ತಂಗನಹಳ್ಳಿ ಗ್ರಾಮಸ್ಥರ ಅಹವಾಲು ಆಲಿಸಿದರು
ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರು ತಂಗನಹಳ್ಳಿ ಗ್ರಾಮಸ್ಥರ ಅಹವಾಲು ಆಲಿಸಿದರು   

ತುಮಕೂರು: ಕೊರಟಗೆರೆ ತಾಲ್ಲೂಕಿನ ಕೊಳಾಲ ಹೋಬಳಿಯ ತಂಗನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಎಂ–ಸ್ಯಾಂಡ್‌(ಕಲ್ಲಿನ ಪುಡಿ) ತಯಾರಿಸುವ ಜಲ್ಲಿ–ಕ್ರಷರ್‌ ಘಟಕ ತೆರೆಯಲು ಅನುಮತಿ ನೀಡಬಾರದು ಎಂದು ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಂಡು ಎಂ–ಸ್ಯಾಂಡ್‌ ತಯಾರಿಸುವ ಕಂಪನಿಗೆ ನೀಡಲು ಮುಂದಾಗಿದೆ. ಇದರಿಂದ ನಮ್ಮ ವ್ಯವಸಾಯದ ಜೀವನಕ್ಕೆ ಕುತ್ತು ಬರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಸ್ವಾಧೀನಕ್ಕೆ ಪಡೆಯುತ್ತಿರುವ ಬೆಟ್ಟದ ತಪ್ಪಲು ಪ್ರದೇಶ ಹಾಗೂ ಜಮೀನುಗಳಲ್ಲಿ ಕದರಿ ನರಸಿಂಹಸ್ವಾಮಿ ಮತ್ತು ಮುತ್ತುರಾಯಸ್ವಾಮಿ ದೇವಸ್ಥಾನಗಳಿವೆ. ಈ ದೈವಗಳನ್ನು ಬಹಳಷ್ಟು ಸ್ಥಳೀಯರು ಆರಾಧಿಸುತ್ತಾರೆ. ಅಲ್ಲದೆ, ಇಲ್ಲಿನ ಕಲ್ಲುಬಾವಿಗಳು ಮತ್ತು ಕೊಳವೆಬಾವಿಗಳು ಜನರ ನೀರಿನ ಮೂಲಗಳಾಗಿವೆ ಎಂದು ವಿವರಿಸಿದರು.

ADVERTISEMENT

ಊರಿನಲ್ಲಿ ಒಂದು ಸಾವಿರ ಜನರಿದ್ದಾರೆ. ಸರ್ಕಾರಿ ಶಾಲೆಯೂ ಇದೆ. ಇಲ್ಲಿ ಗಣಿಗಾರಿಕೆ ಶುರುವಾದರೆ ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ ಹಾಳಾಗುತ್ತದೆ. ಬೆಟ್ಟದಲ್ಲಿನ ವನ್ಯಜೀವಿಗಳ ಜೀವಕ್ಕೂ ಕುತ್ತು ಬರುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

ನಮ್ಮ ಜಮೀನು ಹೋದರೆ, ನಾವು ಬೀದಿಗೆ ಬೀಳುತ್ತೇವೆ. ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ದುಃಖಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಪರಿಶೀಲಿಸಿ ಕ್ರಮ ವಹಿಸುವುದುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.