ADVERTISEMENT

20 ವರ್ಷಗಳ ನಂತರ ತುಂಬಿದ ಕೆರೆ

ಬಾಗಿನ ಅರ್ಪಣೆ: ದೊಡ್ಡಮಧುರೈ ಗ್ರಾಮದಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 5:04 IST
Last Updated 9 ನವೆಂಬರ್ 2020, 5:04 IST
ಕಣಿಗಲ್ ತಾಲ್ಲೂಕಿನ ದೊಡ್ಡಮಧೂರೈ ಕೆರೆಗೆ ಶಾಸಕ ಡಾ. ರಂಗನಾಥ್ ಬಾಗಿನ ಅರ್ಪಿಸಿದರು
ಕಣಿಗಲ್ ತಾಲ್ಲೂಕಿನ ದೊಡ್ಡಮಧೂರೈ ಕೆರೆಗೆ ಶಾಸಕ ಡಾ. ರಂಗನಾಥ್ ಬಾಗಿನ ಅರ್ಪಿಸಿದರು   

ಕುಣಿಗಲ್: ಹೇಮಾವತಿ ವಿತರಣಾ ನಾಲೆ–26 ನಿರ್ಮಾಣವಾಗಿ 20 ವರ್ಷಗಳ ನಂತರ ನೀರು ಹರಿದು ತಾಲ್ಲೂಕಿನ ದೊಡ್ಡಮಧುರೈ ಗ್ರಾಮದ ಕೆರೆ ತುಂಬಿತು.

ಗ್ರಾಮಸ್ಥರು ಭಾನುವಾರ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ಸಂಭ್ರಮದಿಂದ ಬಾಗಿನ ಅರ್ಪಿಸಿದರು.

ದೊಡ್ಡಮಧುರೈ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯ, ಗ್ರಾಮದ ಪ್ರಮುಖ ಬೀದಿಗಳು ತೋರಣಗಳಿಂದ ಶೃಂಗಾರಗೊಂಡಿತ್ತು.

ADVERTISEMENT

ವಿತರಣಾ ನಾಲೆ ನಿರ್ಮಾಣಗೊಂಡು 20 ವರ್ಷ ಕಳೆದಿತ್ತು. ನಾಲೆಯಲ್ಲಿ ಹೂಳು ತುಂಬಿ ನೀರು ಹರಿದಿರಲಿಲ್ಲ. ಗ್ರಾಮಸ್ಥರು ಶ್ರಮದಾನದ ಮೂಲಕ ನಾಲೆ ಸ್ವಚ್ಛಗೊಳಿಸಿದ್ದರು. ನಂತರ ಗ್ರಾಮದ ಯುವಕರು ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ಹೇಮಾವತಿ ನೀರಿಗಾಗಿ ಹೋರಾಟ ಪ್ರಾರಂಭಿಸಿದ್ದರು. ಶಾಸಕ ಡಾ. ರಂಗನಾಥ್ ಸರ್ಕಾರದ ಗಮನ ಸೆಳೆದು ನೀರನ್ನು ಹರಿಸಿದ ಕಾರಣ ಕೆರೆ ತುಂಬಿದೆ. ನೀರು ತುಂಬಲು ಶ್ರಮಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಭಾನುವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಶಾಸಕ ಡಾ.ರಂಗನಾಥ್ ಅವ
ರನ್ನು ಗ್ರಾಮಸ್ಥರು ಪೂರ್ಣ ಕುಂಭ
ದೊಂದಿಗೆ ಸ್ವಾಗತಿಸಿ ನಂತರ ಕೆರೆಗೆ ಬಾಗಿನ ಅರ್ಪಿಸಿದರು. ಪ್ರಮುಖ ದೇವಾಲ
ಯಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಶಾಸಕ ಡಾ. ರಂಗನಾಥ್ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಜಲಸಂ‍ಪನ್ಮೂಲ ಸಚಿವರಾಗಿದ್ದಾಗ ನಾಲೆಗಳ ಅಭಿವೃದ್ಧಿಗೆ ₹9 ಕೋಟಿ ಬಿಡುಗಡೆ ಮಾಡಿದ ಕಾರಣ ನಾಲೆ ಸ್ವಚ್ಛಗೊಳಿಸಲಾಗಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿದು ದಾಖಲೆಯಾಗಿದೆ. ವಿತರಣಾ ನಾಲೆ 26ರಲ್ಲಿ ನೀರು ಹರಿದ ಪರಿಣಾಮ ಯಡೆಯೂರು ಹೋಬಳಿಯ 14 ಕೆರೆಗಳಿಗೆ ನೀರು ಬಂದಿದೆ ಎಂದರು. ‌‌

ತಾಲ್ಲೂಕಿಗೆ ನೇರವಾಗಿ ಹೇಮಾವತಿ ನೀರು ಹರಿಯಲು ಸಂಪರ್ಕ ಕಾಲುವೆ ನಿರ್ಮಾಣಕ್ಕೆ
₹615 ಕೋಟಿ ಮಂಜೂರಾಗಿತ್ತು. ಈ ಯೋಜನೆಯನ್ನುಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ನೀರು ಹರಿಯುವ ಸಾಧ್ಯತೆ ಕಡಿಮೆ ಇರುವ ಶ್ರೀರಂಗ ಏತನೀರಾವರಿ ಯೋಜನೆಗೆ ₹480 ಕೋಟಿ ನೀಡಲು ಸರ್ಕಾರ ಸಿದ್ಧವಾಗಿದೆ. ಸಂಪರ್ಕ ಕಾಲುವೆ ನಿರ್ಮಾಣವಾಗದ ಹೊರತು ತಾಲ್ಲೂಕಿಗೆ ಹೇಮಾವತಿ ನೇರವಾಗಿ ಹರಿಯಲು ಸಾಧ್ಯವಿಲ್ಲ. ಹೇಮಾವತಿ ನೀರು ಹರಿಯದ ಹೊರತು ಶ್ರೀರಂಗ ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.