ಪಾವಗಡ: ಪಟ್ಟಣದ ಅಗಸರ ಕುಂಟೆ ಕಟ್ಟೆಯಿಂದ ನೀರು ಹೊರಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಅಗಸರ ಕುಂಟೆಗೆ ನಾಗಲಮಡಿಕೆಯಿಂದ ನೀರು ಹರಿಸುವ ಸಂದರ್ಭದಲ್ಲಿ ಕಟ್ಟೆಯನ್ನು ಸಮರ್ಪಕವಾಗಿ ದುರಸ್ತಿ ಮಾಡದೆ ನೀರು ಹರಿಸಲಾಗುತ್ತಿದೆ. ಕುಂಟೆ ಸಮೀಪದ ಮನೆಗಳು, ಶಾಲೆ, ಕಾಲೇಜು ಕಟ್ಟಡಗಳಿಗೆ ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜನರ ಸಲಹೆ ಸ್ವೀಕರಿಸದೆ ಕೆರೆ, ಕಟ್ಟೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡದ ಕಾರಣ ಕಟ್ಟೆ ಬಳಿ ಗುಂಡಿ ಬಿದ್ದು ನೀರು ಹೊರಬರುತ್ತಿದೆ. ಸರ್ಕಾರಿ ಐಟಿಐ ಕಾಲೇಜು, ಮನೆಗಳಿಗೆ ನೀರು ಹರಿಯುತ್ತಿದೆ. ಮನೆ, ಶೌಚಾಲಯಗಳಲ್ಲಿ, ನೀರು ಜೌಗುತ್ತಿರುವುದರಿಂದ ಮನೆಗಳು ಬೀಳುವ ಆತಂಕದಲ್ಲಿ ಜನರಿದ್ದಾರೆ.
ಕುಂಟೆಯಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಬಾಗಿದೆ. ಟ್ಯಾಂಕ್ ಪಿಲ್ಲರ್ಗಳು ಶಿಥಿಲವಾಗಿದೆ. ಟ್ಯಾಂಕ್ ಕುಂಟೆಯೊಳಗೆ ಬಿದ್ದರೆ ರಭಸಕ್ಕೆ ಕಟ್ಟೆ ಒಡೆದು ಭಾರಿ ಅನಾಹುತ ಸಂಭವಿಸಲಿದೆ. ಕುಂಟೆಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಈ ಪ್ರದೇಶದ ಶಾಲೆ, ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜನರ ಅಳಲು.
ಟ್ಯಾಂಕ್ ಬಿದ್ದು ಅನಾಹುತ ಸಂಭವಿಸುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಟ್ಟೆಯನ್ನು ವೈಜ್ಞಾನಿಕವಾಗಿ ದುರಸ್ತಿ ಮಾಡಿಸಿ ನೀರು ಹೊರಹೋಗುವುದನ್ನು ತಡೆಯಬೇಕು. ಕೋಡಿ ನೀರು ಹರಿಯುತ್ತಿರುವ ರಸ್ತೆಯನ್ನು ಸರಿಪಡಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.