ADVERTISEMENT

ತಾತಯ್ಯನ ಉರುಸ್‌ ಭಾವೈಕ್ಯದ ಸಂಕೇತ

ಖವ್ವಾಲಿ ಕಾರ್ಯಕ್ರಮ ವೀಕ್ಷಣೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 6:04 IST
Last Updated 16 ಫೆಬ್ರುವರಿ 2023, 6:04 IST
ಚಿಕ್ಕನಾಯಕನಹಳ್ಳಿಯಲ್ಲಿ ತಾತಯ್ಯನವರ ಉರುಸ್‌ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಖವ್ವಾಲಿ ವೀಕ್ಷಣೆಗೆ ನೆರೆದಿದ್ದ ಜನರು
ಚಿಕ್ಕನಾಯಕನಹಳ್ಳಿಯಲ್ಲಿ ತಾತಯ್ಯನವರ ಉರುಸ್‌ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಖವ್ವಾಲಿ ವೀಕ್ಷಣೆಗೆ ನೆರೆದಿದ್ದ ಜನರು   

ಚಿಕ್ಕನಾಯಕನಹಳ್ಳಿ: ‘ಜಾತಿ, ಧರ್ಮ ಎನ್ನದೆ ಎಲ್ಲರೂ ಪಾಲ್ಗೊಳ್ಳುವ ಇಲ್ಲಿನ ತಾತಯ್ಯನವರ ಉರುಸ್‌ ಭಾವೈಕ್ಯದ ಸಂಕೇತವಾಗಿದೆ’ ಎಂದು ಮಾಜಿ ಶಾಸಕ ಸಿ.ಬಿ. ಸುರೇಶ್‌ ಬಾಬು ಬಣ್ಣಿಸಿದರು.

ಪಟ್ಟಣದಲ್ಲಿ ಹಜರತ್‌ ಸೈಯದ್‌ ಮೊಹಿದ್ದೀನ್‌ ಷಾ ಖಾದ್ರಿಯವರ ಉರುಸ್‌ (ತಾತಯ್ಯನವರ ಉತ್ಸವ) ಅಂಗವಾಗಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಖವ್ವಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಫಿ ಸಂತ ತಾತಯ್ಯ ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿದ್ದಾರೆ. ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಎಲ್ಲರೂ ಭಾಗಿಯಾಗಿ ಉತ್ಸವ ಆಚರಿಸುತ್ತಿದ್ದಾರೆ
ಎಂದರು.

ADVERTISEMENT

ಇಂದು ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಸುತ್ತಿರುವ ಕೋಮುಶಕ್ತಿಗಳಿಗೆ ಬುದ್ಧಿ ಹೇಳಬೇಕಾಗಿದೆ. ಯಾರೂ ಇಂಥದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಹುಟ್ಟಿದ ಮೇಲೆ ಆಯಾ ಸಮುದಾಯ, ಧರ್ಮದ ಸಂಪ್ರದಾಯ ಆಚರಿಸಿಕೊಂಡು ಹೋಗುತ್ತೇವೆ. ಈ ದೇಶದ ಗಾಳಿ, ನೀರು ಸೇವಿಸುವ ನಾವೆಲ್ಲರೂ ಭಾರತಾಂಬೆಯ ಮಕ್ಕಳಾಗಿದ್ದೇವೆ ಎಂದು
ತಿಳಿಸಿದರು.

ನಾವಿರುವ ಜಾಗದಲ್ಲಿ ನೆರೆಹೊರೆಯವರನ್ನೇ ಬಂಧುಗಳೆಂದು ತಿಳಿದು ಬದುಕಿದರೆ ಸಮಾಜ ನೆಮ್ಮದಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಬಸವರಾಜು, ಸಿ.ಡಿ. ಚಂದ್ರಶೇಖರ್‌, ಕೆ.ಜಿ. ಕೃಷ್ಣೇಗೌಡ, ಆದಿಲ್‌ ಪಾಷಾ, ಉರುಸ್‌ ಕಮಿಟಿ ಅಧ್ಯಕ್ಷ ರೇಣುಕಸ್ವಾಮಿ, ಜಕಾಉಲ್ಲಾ, ಬಾಬು ಸಾಹೇಬ್‌, ಅನ್ಸರ್‌ ಪಾಷಾ, ಸೈಯದ್‌ ಅಲಿ, ಜಾವಿದ್‌ ಹಾಜರಿದ್ದರು. ಮುಂಬೈನ ಸುಲ್ತಾನಾ ನಾಜಾನ್‌, ಕೊಲ್ಲಾಪುರದ ಛೋಟೆ ಶಬನಂ ಬಾನು ತಂಡಗಳಿಂದ ಖವ್ವಾಲಿ ನಡೆಯಿತು. ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.