ADVERTISEMENT

ಹೃದಯಾಘಾತದಿಂದ ಶಿಕ್ಷಕ ಸಾವು

ಬಿಇಒ ಕಿರುಕುಳದಿಂದ ನೊಂದಿದ್ದರು: ಕುಟುಂಬಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:24 IST
Last Updated 5 ಆಗಸ್ಟ್ 2025, 4:24 IST
ಸುಬ್ಬರಾಯಪ್ಪ
ಸುಬ್ಬರಾಯಪ್ಪ   

ಮಧುಗಿರಿ: ತಾಲ್ಲೂಕಿನ ಮಾರಿಬೀಳು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುಬ್ಬರಾಯಪ್ಪ (55) ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.

ಕೊರಟಗೆರೆ ತಾಲ್ಲೂಕಿನ ಗೊಲ್ಲಹಳ್ಳಿಯ ತಮ್ಮ ನಿವಾಸದಿಂದ ಶಾಲೆಗೆ ತೆರಳಲು ಮುಂದಾಗುತ್ತಿದ್ದ ಸಮಯದಲ್ಲಿ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗೊಲ್ಲಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಬಿಇಒ ಕಿರುಕುಳ: ‘ಕೆಲ ದಿನಗಳಿಂದ ಶಿಕ್ಷಕರಿಗೆ ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಕಿರುಕುಳ ನೀಡುತ್ತಿದ್ದಾರೆ. ಜುಲೈ ಅಂತ್ಯದಲ್ಲಿ ಮಾರಿಬೀಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದು ಸುಬ್ಬರಾಯಪ್ಪ ಬೆಳಿಗ್ಗೆ 9.50 ಗಂಟೆಗೆ ಶಾಲೆಗೆ ಹೋಗಿದ್ದರು. ತಡವಾಗಿ ಶಾಲೆಗೆ ಬಂದಿದ್ದೀರಿ ಎಂದು ಬಿಇಒ ಗೈರು ಹಾಜರಿ ಹಾಕಿದ್ದರು. ಅಂದಿನಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸೋಮವಾರ ಬೆಳಿಗ್ಗೆ 8 ಗಂಟೆಗೆ ಅವಸರದಿಂದ ಹೋಗುವಾಗ ಮನೆಯಲ್ಲಿ ಕುಸಿದು ಬಿದ್ದರು’ ಎಂದು ಸುಬ್ಬರಾಯಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

‘ಸುಬ್ಬರಾಯಪ್ಪ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಮುಂದಾಗಿದ್ದರು. ಪ್ರತಿ ದಿನ ಮಗನ ಬಳಿ ಈ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಬಿಇಒ ಯಾವಾಗಲೂ ಪರಿಶೀಲನೆ ನೆಪದಲ್ಲಿ ಶಾಲೆಗೆ ಬರುತ್ತಾರೆ. ಎರಡು ನಿಮಿಷ ತಡವಾದರೂ ಗೈರು ಎಂದು ದಾಖಲಿಸುತ್ತಾರೆ. ಸರ್ಕಾರದ ಕೆಲಸದ ನಿಮಿತ್ತ ಹೊರಗಡೆ ಹೋದರೂ ಹೀಗೆ ಮಾಡುತ್ತಾರೆ. ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಸುಬ್ಬರಾಯಪ್ಪ ನಮ್ಮ ಬಳಿ ಅಳಲು ತೋಡಿಕೊಂಡಿದ್ದರು ಎಂದು ಸ್ನೇಹಿತರು ತಿಳಿಸಿದರು.

‘ಬೇರೆ ಶಾಲೆಗೆ ವರ್ಗಾಯಿಸುವಂತೆ ಸುಬ್ಬರಾಯಪ್ಪ ಕೇಳಿಕೊಂಡಿದ್ದರು. ವರ್ಗಾವಣೆ ಪ್ರಕ್ರಿಯೆ ನಡೆಯುವಾಗಲೇ ದುರಂತ ಆಗಿದೆ. ಬಿಇಒ ಹನುಮಂತರಾಯಪ್ಪ ಕಳೆದ ವಾರದಿಂದ ತಾಲ್ಲೂಕಿನ 14ರಿಂದ 15 ಜನ ಶಿಕ್ಷಕರಿಗೆ ಇದೇ ರೀತಿ ಕಿರುಕುಳ ನೀಡಿದ್ದಾರೆ. ಉದ್ಧಟತನ ತೋರುತ್ತಿದ್ದು, ಯಾರ ಮಾತೂ ಕೇಳುತ್ತಿಲ್ಲ’ ಎಂದು ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.