ತುಮಕೂರು: ಕೇಂದ್ರ ಸರ್ಕಾರ ಕೋವಿಡ್–19 ಲಸಿಕೆಯನ್ನು ಒಂದು ಡೋಸ್ಗೆ ₹150ಕ್ಕೆ ಖರೀದಿಸಿ, ರಾಜ್ಯಗಳು ₹400ಕ್ಕೆ ಕೊಂಡು
ಕೊಳ್ಳುವಂತೆ ಒತ್ತಾಯಿಸುತ್ತಿರುವುದನ್ನು ಸಿಪಿಎಂ ಜಿಲ್ಲಾ ಸಮಿತಿ ಖಂಡಿಸಿದೆ.
ಇಡೀ ರಾಷ್ಟ್ರವೇ ಸಂಕಷ್ಟದಲ್ಲಿದೆ. ರಾಜ್ಯಕ್ಕೆ ನೀಡಬೇಕಾದ ಕೋವಿಡ್ ಪರಿಹಾರ, ಜಿಎಸ್ಟಿ ಬಾಕಿ ಹಣವನ್ನು ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಇದೀಗ ಲಸಿಕೆ ಬೆಲೆ ಹೆಚ್ಚಿಸುತ್ತಿರುವುದು ಸರಿಯಲ್ಲ ಎಂದು ಸಮಿತಿ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಕೊಡಬೇಕಾದ ಎಲ್ಲ ಬಾಕಿ ಹಣ, ಕೋವಿಡ್ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕೋವಿಡ್ ಲಸಿಕೆಯನ್ನು ಕೇಂದ್ರವೇ ಉಚಿತವಾಗಿ ಒದಗಿಸಬೇಕು.ಪ್ರಧಾನ ಮಂತ್ರಿ ಕೇರ್ಸ್ ಫಂಡ್ಗೆ ದೇಶದಾದ್ಯಂತ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದು, ಈ ಹಣವನ್ನು ಬಳಸಿಕೊಂಡು ಉಚಿತವಾಗಿ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಜ್ಞರ ಮುನ್ನೆಚ್ಚರಿಕೆಯ ಸೂಚನೆಯ ನಡುವೆಯೂ, ಸರ್ಕಾರದ ಜವಾಬ್ದಾರಿ ರಹಿತ ನಡೆಯಿಂದ ಕೋವಿಡ್ ಎರಡನೇ ಅಲೆಗೆ ಜನರು ದೊಡ್ಡ ಸಂಖ್ಯೆಯಲ್ಲಿ ಸಾವಿಗೀಡಾಗುವಂತಾಗಿದೆ. ಅತ್ಯಂತ ವೇಗವಾಗಿ ಹರಡಲು ಕಾರಣವಾಗಿದೆ. ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯ ವೇಗವನ್ನು ಗಮನಿಸಿದರೆ ರಾಜ್ಯದಲ್ಲಿರುವ ಈಗಿನ ಆಸ್ಪತ್ರೆ ವ್ಯವಸ್ಥೆ ಸಾಲದಾಗಿದೆ. ಅದಕ್ಕಾಗಿ, ಶಾಲಾ, ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ, ಹೋಟೆಲ್ಗಳನ್ನು ಬಳಸಿಕೊಳ್ಳಲು ಕೇಂದ್ರ ಸರಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಚಾರದಲ್ಲಿ ಲೋಕಸಭಾ ಸದಸ್ಯರು ಬಾಯಿ ಬಿಡುತ್ತಿಲ್ಲ. ಜನತೆ ಸಂಕಷ್ಟದಲ್ಲಿ ಇರುವಾಗ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ದೌರ್ಜನ್ಯ ನಡೆಸುತ್ತಿದೆ. ಆದರೆ ಸಂಸದರು ಬಾಯಿ ಮುಚ್ಚಿಕೊಂಡು ಇರುವುದನ್ನು ನೋಡಿದರೆ ಅವರಿಗೆ ರಾಜ್ಯದ ಜನರ ಮೇಲೆ ಇರುವ ಕಳಕಳಿಯನ್ನು ತೋರಿಸುತ್ತದೆ. ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಅಗತ್ಯ ನೆರವು ಪಡೆದು ಜನರನ್ನು ರಕ್ಷಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.