ಕೊರಟಗೆರೆ: ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಕೋವಿಡ್ನಿಂದಾಗಿ ವರಮಹಾಲಕ್ಷ್ಮೀ ಹಬ್ಬದ ದಿನ ಭಕ್ತರಿಲ್ಲದೇ ಬಿಕೋ ಎನ್ನುತ್ತಿತ್ತು.
ಕೋವಿಡ್ನಿಂದಾಗಿ ದೇಗುಲದಲ್ಲಿ ವಿಶೇಷ ದಿನಗಳಲ್ಲಿ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಬಗ್ಗೆ ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿತ್ತು.
ಅರ್ಚಕರು ಮುಂಜಾನೆಯೇ ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ಬಾಗಿಲು ಹಾಕಿದ್ದರು. ದೇಗುಲದ ಮುಖ್ಯ ದ್ವಾರವನ್ನು ಮುಚ್ಚಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ದೇವಾಲಯದ ಸುತ್ತ ಸಾರ್ವಜನಿಕರಿಗೆ ನಿರ್ಬಂಧ ಹೇರಿ ಬ್ಯಾರಿಕೇಡ್ ಅಳವಡಿಸಿತ್ತು.
ಮಾಹಿತಿ ಇಲ್ಲದೆ ದೇಗುಲಕ್ಕೆ ಬಂದ ಭಕ್ತರು ಮುಖ್ಯದ್ವಾರ ಬಾಗಿಲು ಹಾಕಿರುವುದನ್ನು ನೋಡಿ ಅಲ್ಲೆ ಕೈ ಮುಗಿದು ಹಿಂದಿರುಗಿದರು. ಪ್ರತಿ ವರ್ಷ ಹಬ್ಬದ ದಿನ ರಾಜ್ಯದ ಮೂಲೆ, ಮೂಲೆಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದರು. ಇದಕ್ಕಾಗಿ ದೇಗುಲ ಆಡಳಿತ ಮಂಡಳಿ ತಿಂಗಳ ಮೊದಲೇ ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿತ್ತು. ವಿಶೇಷ ಪೂಜೆಗಳು ನಡೆಯುತ್ತಿದ್ದವು. ಗೊರವನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಂದ ಆರತಿ ಉತ್ಸವ ನಡೆಯುತ್ತಿತ್ತು.
ಆರು ವರ್ಷಗಳ ನಂತರ ದೇವಾಲಯ ಆಡಳಿತ ಟ್ರಸ್ಟ್ಗೆ ಬಂದ ಕಾರಣ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಇರಾದೆ ಆಡಳಿತ ಮಂಡಳಿಗಿತ್ತು. ಆದರೆ ಕೋವಿಡ್ನಿಂದಾಗಿ ಸಾಧ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.