ಶಿರಾ: ‘ನಗರದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೌರ ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ನಿವೇಶನ ನೀಡಲಾಗುವುದು’ ಎಂದು ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಪೌರ ಕಾರ್ಮಿಕರ ದಿನಾಚರಣೆ ಹಾಗೂ ವಿವಿಧ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ತ್ಯಾಗ ಮತ್ತು ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಬದುಕು ಸಂಕಷ್ಟದಲ್ಲಿದೆ. ಬಹಳಷ್ಟು ಮಂದಿ ಇರಲು ಸೂರಿಲ್ಲದೆ ಸಂಕಷ್ಟಪಡುತ್ತಿದ್ದಾರೆ. ಇಂತಹವರಿಗೆ ಸೂರು ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರ್ವೆ ನಂ. 112ರಲ್ಲಿರುವ 5 ಎಕರೆ 30 ಗುಂಟೆ ಜಾಗದಲ್ಲಿ ನಿವೇಶನ ನೀಡಲಾಗುವುದು. ಗುಡಿಸಲಿನಲ್ಲಿ ವಾಸ ಮಾಡುವವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.
ನಿವೃತ್ತ ಪೌರ ಕಾರ್ಮಿಕರು ಹಾಗೂ ಉತ್ತಮವಾಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಮಂಜುನಾಥ್, ತಹಶೀಲ್ದಾರ್ ಎಂ. ಮಮತಾ, ನಗರಸಭೆ ಪೌರಯುಕ್ತ ಶ್ರೀನಿವಾಸ್, ಎಇಇ ಸೇತುರಾಮ್ ಸಿಂಗ್, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಡಿ.ಎಸ್- 4 ಅಧ್ಯಕ್ಷ ಟೈರ್ ರಂಗನಾಥ್, ಡಿಎಸ್ಎಸ್ ಸಂಚಾಲಕ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯರಾದ ಆರ್. ರಾಮು, ಸಂತೇಪೇಟೆ ನಟರಾಜು, ಸೊಪ್ಪಿನಹಟ್ಟಿ ನಟರಾಜು, ರಾಮಚಂದ್ರಗುಪ್ತ, ಕಂದಾಯ ನಿರೀಕ್ಷಕ ಪ್ರದೀಪ್ ಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.