ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರ ಗ್ರಾಮ ಪಂಚಾಯತಿಯ ಕಂಚಿಗಾನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಕಂಚಿಗಾನಹಳ್ಳಿ ಸೇರಿದೆ. ಸಚಿವರು ತಕ್ಷಣ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ. ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದು, ಒಂದು ಕೊಳವೆ ಬಾವಿ ಇದೆ. ಇದರಿಂದಲೇ ಇಷ್ಟು ದಿನ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು.
ಎರಡು ತಿಂಗಳಿನಿಂದ ಕೊಳವೆಬಾವಿಯಲ್ಲಿ ಕುಡಿಯುವ ನೀರು ಕಡಿಮೆಯಾಗಿ ಸಮಸ್ಯೆ ಪ್ರಾರಂಭವಾದ್ದರಿಂದ ಏಪ್ರಿಲ್ 7ರಂದು ಗ್ರಾಮ ಪಂಚಾಯಿತಿಯಿಂದ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದೆ. ನೀರು ಸಿಕ್ಕಿದ್ದರು ಕೊಳವೆ ಬಾವಿಗೆ ಮೋಟರ್ ಪಂಪ್ ಜೋಡಿಸಿ ನೀರು ನೀಡದೆ ನಿರ್ಲಕ್ಷಿಸಿದ್ದಾರೆ ಎಂದರು.
ಹೊಸದಾಗಿ ಕೊಳವೆ ಬಾವಿ ಕೊರೆಸಿ 36 ದಿನಗಳು ಕಳೆದರು ಗ್ರಾಮ ಪಂಚಾಯಿತಿ ಅವರು ಮೋಟರ್, ಪಂಪ್ ಜೋಡಿಸದೆ ನಿರ್ಲಕ್ಷ್ಯವಹಿಸಿರುವುದರಿಂದ ಹಳೆಯ ಕೊಳವೆ ಬಾವಿಯಲ್ಲಿ ಬರುತ್ತಿರುವ ನೀರನ್ನು ಗ್ರಾಮಕ್ಕೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಎರಡು ಕಡೆ ನೀರು ಪೂರೈಸಲು ಸಾಧ್ಯವಾಗದೆ ವಾಟರ್ ಮ್ಯಾನ್ ಓವರ್ ಹೆಡ್ ಟ್ಯಾಂಕ್ ಮೂಲಕ ಗ್ರಾಮದಲ್ಲಿ ಎರಡು ದಿನಗಳಿಗೆ ಒಮ್ಮೆ ನೀರು ನೀಡುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ಎರಡು ದಿನಗಳಿಗೆ ಒಂದು ಬಾರಿ ನೀರು ನೀಡುವುದರಿಂದ ಜನರು ಅಂತರ ಮರೆತು ನೀರಿಗಾಗಿ ಪರದಾಡಬೇಕಿದೆ. ಇದು ಸಹ ಕೋವಿಡ್ ಹೆಚ್ಚಲು ಕಾರಣವಾಗುತ್ತಿದೆ. ಕೋವಿಡ್ ಸಂಕಷ್ಟ ಮರೆತು ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪಕ್ಕದ ಹಳ್ಳಿಗಳಿಗೆ ಹೋಗುವಂತಾಗಿದೆ.
ಸಚಿವರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನೀರಿನ ಸಮಸ್ಯೆ ನೀಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.