ತುಮಕೂರು: ’ಆಯೋಡಿನ್ ಯುಕ್ತ ಉಪ್ಪು, ತರಕಾರಿಗಳನ್ನು ಸೇವಿಸಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಂ.ಆರ್.ಕಾಮಾಕ್ಷಿ ಹೇಳಿದರು.
ನಗರದ ಚಿಕ್ಕಪೇಟೆಯ ಅತ್ತಿಮಬ್ಬೆ ವಿದ್ಯಾಮಂದಿರದಲ್ಲಿ ಆಯೋಜಿಸಿದ್ಧ ವಿಶ್ವ ಆಯೋಡಿನ್ ಕೊರತೆಯ ನಿಯಂತ್ರಣ ಮತ್ತು ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
’ಸಮಾಜದಲ್ಲಿ ಹೆಚ್ಚು ಜವಾಬ್ದಾರಿಯುತ ಇಲಾಖೆಗಳೆಂದರೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು. ಆರೋಗ್ಯ ಇಲಾಖೆ ಜೀವ ಉಳಿಸಿದರೆ ಶಿಕ್ಷಣ ಇಲಾಖೆ ಜೀವನ ರೂಪಿಸುತ್ತದೆ. ಹಾಗಾಗಿ ಎರಡೂ ಇಲಾಖೆಗಳು ಮಕ್ಕಳ ಆರೋಗ್ಯ ಮತ್ತು ಭವಿಷ್ಯ ರೂಪಿಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಿವೆ’ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಪಾಲಿಕೆ ಸದಸ್ಯೆ ದೀಪಾ, ‘ಆಯೋಡಿನ್ ಆರೋಗ್ಯಕ್ಕೆ ಎಷ್ಟು ಮಹತ್ವ ಎಂಬುದನ್ನು ಒಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಮನವರಿಕೆ ಮಾಡಿಕೊಟ್ಟರೆ ಅವರು ಅನೇಕರಿಗೆ ಆ ಕುರಿತು ಜಾಗೃತಿ ಮೂಡಿಸುತ್ತಾರೆ. ಇಂತಹ ಕಾರ್ಯಕ್ರಮ ಶಾಲೆಗಳಲ್ಲಿ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.
ಮುಖ್ಯ ಶಿಕ್ಷಕಿ ಜಲಜಾ ಜೈನ್ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್, ವೈದ್ಯಾಧಿಕಾರಿ ಡಾ.ಕಾಮಾಕ್ಷಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕ ಜಹೀರುದ್ದೀನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಹನುಮಂತರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ, ಪುರುಷ ಆರೋಗ್ಯ ವಿಭಾಗದ ಕಿರಿಯ ಸಹಾಯಕ ನರಸಿಂಹರಾಜು, ಜಿಲ್ಲಾ ತಂಬಾಕು ನಿಯಂತ್ರಣ ವಿಭಾಗದ ಸಲಹೆಗಾರ ರವಿಪ್ರಕಾಶ್, ಶಿಕ್ಷಕ ಮಂಜುನಾಥ್, ಅಗ್ರಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.