ADVERTISEMENT

ಎಟಿಎಂನಿಂದ ₹ 36 ಸಾವಿರ ಡ್ರಾ ಮಾಡಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 16:35 IST
Last Updated 10 ಜುಲೈ 2019, 16:35 IST

ತುಮಕೂರು: ನಗರದ ಲಕ್ಷ್ಮಮ್ಮ ಎಂಬುವವರ ಖಾತೆಯಿಂದ ದುಷ್ಕರ್ಮಿಗಳು ₹ 36 ಸಾವಿರವನ್ನು ಮಂಗಳವಾರ ಎಟಿಎಂ ಮೂಲಕ ಡ್ರಾ ಮಾಡಿದ್ದಾರೆ.

ಲಕ್ಷ್ಮಮ್ಮ ಅವರು ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಈ ಖಾತೆಗೆ ಅವರ ಪತಿ ಶ್ರೀರಾಮಯ್ಯ ಅವರ ಮೊಬೈಲ್ ಸಂಖ್ಯೆ ಜೋಡಣೆ ಮಾಡಿದ್ದಾರೆ.

ಶ್ರೀರಾಮಯ್ಯ ಅವರು ಚಿಕ್ಕತೊಟ್ಲುಕೆರೆಯ 66/11 ಕೆ.ವಿ. ವಿದ್ಯುತ್ ಉಪಸ್ಥಾವರದಲ್ಲಿ ಕಿರಿಯ ಎಂಜಿನಿಯರ್ ಆಗಿದ್ದು, ಜುಲೈ 8ರಂದು ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ಬೆಳಗಿನ ಜಾವ 4.57ಕ್ಕೆ ಅವರ ಮೊಬೈಲ್‌ಗೆ ಲಕ್ಷ್ಮಮ್ಮ ಅವರ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿರುವ ಸಂದೇಶ ಬಂದಿದೆ.

ADVERTISEMENT

‘ಶ್ರೀರಾಮಯ್ಯ ಅವರು ಹಣ ಡ್ರಾ ಆಗಿರುವ ಬಗ್ಗೆ ಪತ್ನಿಯನ್ನು ವಿಚಾರಿಸಿದ್ದಾರೆ. ನಂತರ ಕೆನರಾ ಬ್ಯಾಂಕ್ ಶಾಖೆಗೆ ಹೋಗಿ ವಿಚಾರಿಸಿದ್ದಾರೆ. ಬ್ಯಾಂಕಿನವರು ಶಿರಾ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕಿನ ಎ.ಟಿ.ಎಂನಿಂದ ಹಣ ಡ್ರಾ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ.

'ಬ್ಯಾಂಕಿನ ಖಾತೆ ಸಂಖ್ಯೆ, ಎಟಿಎಂ ಕಾರ್ಡ್ ಸಂಖ್ಯೆ, ಸಿ.ವಿ.ಸಿ ಸಂಖ್ಯೆ, ಪಾಸ್ ವರ್ಡ್ ಸಂಖ್ಯೆಯನ್ನು ಯಾರಿಗೂ ನೀಡಿಲ್ಲ. ಯಾರೋ ಕಳ್ಳರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ' ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.