ADVERTISEMENT

ಹೆದ್ದಾರಿ ಅಭಿವೃದ್ಧಿಗೆ ಮರಗಳ ಹನನ

ಬಳ್ಳಾರಿ-– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಸುಪ್ರತೀಕ್.ಎಚ್.ಬಿ.
Published 2 ಆಗಸ್ಟ್ 2020, 7:51 IST
Last Updated 2 ಆಗಸ್ಟ್ 2020, 7:51 IST
ಹಾಲುಗೊಣ ಗ್ರಾಮದ ಬಳಿಯಲ್ಲಿ ಇದ್ದ 200 ವರ್ಷದ ಹಳೆಯ ಆಲದ ಮರವನ್ನು ಕತ್ತರಿಸುತ್ತಿರುವ ದೃಶ್ಯ
ಹಾಲುಗೊಣ ಗ್ರಾಮದ ಬಳಿಯಲ್ಲಿ ಇದ್ದ 200 ವರ್ಷದ ಹಳೆಯ ಆಲದ ಮರವನ್ನು ಕತ್ತರಿಸುತ್ತಿರುವ ದೃಶ್ಯ   

ತಿಪಟೂರು: ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗಾಗಿ ಜಿಲ್ಲೆಯ ಮೂರು ತಾಲ್ಲೂಕಿನ ಸಾವಿರಾರು ಮರಗಳನ್ನು ಹನನ
ಮಾಡಲಾಗಿದೆ.

ಬಳ್ಳಾರಿಯಿಂದ ಚಾಮರಾಜನಗರದವರೆಗೆ ರಾಷ್ಟ್ರೀಯ ಹೆದ್ದಾರಿ 150ಎ ಅನ್ನುಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಇದರಿಂದ 425 ಕಿ.ಮೀ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ರಸ್ತೆಯ ಬದಿಯಲ್ಲಿ ಇದ್ದ ನೂರಾರು ವರ್ಷ ವಯಸ್ಸಿನ ಸಾವಿರಾರು ಮರಗಳನ್ನು ಕಡಿಯಲಾಗಿದೆ.

ಬಳ್ಳಾರಿಯಿಂದ ಚಳ್ಳಕೆರೆ, ಹಿರಿಯೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರಿನ ಕೆ.ಬಿ.ಕ್ರಾಸ್‌, ತುರುವೇಕೆರೆ, ನಾಗಮಂಗಲ, ಶ್ರೀರಂಗಪಟ್ಟಣ, ಮೈಸೂರು, ನಂಜನಗೂಡು ಮಾರ್ಗವಾಗಿ ಚಾಮರಾಜನಗರ ತಲುಪುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಎರಡು ಬದಿಯಲ್ಲಿ ಸಾವಿರಾರು ಗಿಡ- ಮರಗಳನ್ನು ಕಾಣಬಹುದಿತ್ತು. ಆದರೆ, ಈ ರಸ್ತೆಯನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಎಲ್ಲ ಮರಗಳನ್ನು ಕತ್ತರಿಸಲಾಗುತ್ತಿದೆ.

ADVERTISEMENT

ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿ ಹಾಲುಗೊಣದವರೆಗೆ ಎಡ ಭಾಗದಲ್ಲಿ 757, ಬಲಭಾಗದಲ್ಲಿ 995 ಸೇರಿ ಒಟ್ಟು 1752 ಮರಗಳು ಹಾಗೂ ಹಾಲುಗೊಣದಿಂದ ಕೆ.ಬಿ.ಕ್ರಾಸ್ ಬಳಿಗೆ 179 ಮರಗಳನ್ನು ಕಡಿಯಲಾಗಿದೆ. ಅದರಲ್ಲಿ ಎಷ್ಟೋ ಮರಗಳು
ನೂರಾರು ವರ್ಷದಷ್ಟು ಹಳೆಯವು.

ಪರಿಸರ ತಜ್ಞರೊಬ್ಬರ ಪ್ರಕಾರ 200 ವರ್ಷಗಳಷ್ಟು ಹಳೆಯದಾದ ಹೆಮ್ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆಯಿಂದ ಚರ್ಚಿಸಿದ್ದರೆ ಮರಗಳನ್ನು ಉಳಿಸುವ ಯೋಜನೆಗೆ ಬರಬಹುದಿತ್ತು ಎನ್ನುತ್ತಾರೆ.

‘ಪ್ರಸ್ತುತ ಇರುವ ರಸ್ತೆಯ ಯಾವುದಾರೂ ಒಂದು ಭಾಗದ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಿದ್ದರೆ ಒಂದು ಭಾಗದ ಮರಗಳು ಉಳಿಯುತ್ತಿದ್ದವು. ರಸ್ತೆಯೂ ಅಭಿವೃದ್ಧಿಯಾಗುತ್ತಿತ್ತು. ಆದರೆ, ಅಧಿಕಾರಿಗಳು ಪರಿಸರವನ್ನು ಲೆಕ್ಕಿಸದೆ ರಸ್ತೆ ನಿರ್ಮಾಣ
ಕಾಮಗಾರಿಗೆ ಮುಂದಾಗಿರುವುದು ಖಂಡನೀಯ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.