ADVERTISEMENT

ಅತಂತ್ರ ಸ್ಥಿತಿಯಲ್ಲಿ ತಿಪಟೂರು ನಗರಸಭೆ

ನ್ಯಾಯಾಲಯದ ಮೆಟ್ಟಿಲಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ– ನಗರದ ಅಭಿವೃದ್ಧಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 4:20 IST
Last Updated 8 ಜೂನ್ 2020, 4:20 IST
ತಿಪಟೂರು ನಗರಸಭೆ ಕಚೇರಿ
ತಿಪಟೂರು ನಗರಸಭೆ ಕಚೇರಿ   

ತಿಪಟೂರು: ನಗರಸಭೆ ಚುನಾವಣೆ ನಡೆದು ವರ್ಷವೇ ಕಳೆದಿದೆ. ಕೆಲ ಸದಸ್ಯರು ಮೀಸಲಾತಿ ಬದಲಾವಣೆಗಾಗಿ ನ್ಯಾಯಾಲಯದ ಮೆಟ್ಟಿಲೇರಿ ರುವುದರಿಂದ ಆಡಳಿತ ಮಂಡಳಿ ರಚನೆ ವಿಳಂಬವಾಗಿದೆ.ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

2019ರ ಮೇನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನವಾಣೆ ನಡೆದಿತ್ತು. ಸದಸ್ಯರ ಆಯ್ಕೆಯಾದ 10 ತಿಂಗಳ ಬಳಿಕ ಅಂದರೆ ಇದೇ ಮಾರ್ಚ್‌ ತಿಂಗಳಲ್ಲಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿತು.

ಮೀಸಲಾತಿ ಪ್ರಕಟಿಸುವಲ್ಲಿ ಸರ್ಕಾರ ಮೊದಲೇ ವಿಳಂಬ ಧೋರಣೆ ಅನುಸರಿಸಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾದ ಬಳಿಕ ಕೆಲ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಆಡಳಿತ ಮಂಡಳಿ ರಚನೆ ಇನ್ನಷ್ಟು ತಡವಾಗಿದೆ.

ADVERTISEMENT

ಅತಂತ್ರ ಸ್ಥಿತಿ: ನಗರ ಸುಮಾರು 70 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಒಟ್ಟು 31 ವಾರ್ಡ್‍ಗಳಿವೆ. ಬಿಜೆಪಿ 11, ಕಾಂಗ್ರೆಸ್ 9, ಜೆಡಿಎಸ್ 5, ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರದ ಗದ್ದುಗೆಗಾಗಿ ಪಕ್ಷೇತರೇ ನಿರ್ಣಾಯಕರಾಗಿದ್ದಾರೆ. ಆದರೆ, ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಮುಖಂಡ ಲೋಕೇಶ್ವರ ಹೊರ ಬಂದು ಬಿಜೆಪಿ ಸೇರಿದ್ದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಕೆಲ ವಾರ್ಡ್‌ಗಳ ಜನರು, ‘ಸದಸ್ಯರು ಚುನಾವಣೆಯಲ್ಲಿ ಮಾತ್ರವೇ ಮತಯಾಚನೆಗೆ ಬಂದಿದ್ದು. ಗೆದ್ದ ನಂತರ ತಿರುಗಿಯೂ ನೋಡಿಲ್ಲ. ಬಡಾವಣೆಗಳ ಸಮಸ್ಯೆ ಬಗೆಹರಿಸುವವರು ಯಾರು’ ಎಂದು ಪ್ರಶ್ನಿಸುತ್ತಿದ್ದಾರೆ.

ಇತ್ತ ಸದಸ್ಯರು ಜನರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಕೈಲಾದ ಸಹಕಾರ ನೀಡುತ್ತ ಅಧಿಕಾರಿಗಳ ಸಹಕಾರ ಪಡೆದು ಕೆಲ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ.

ಲಾಕ್‌ಡೌನ್‌ ಕಾರಣ ಆಡಳಿತ ಮಂಡಳಿ ರಚನೆ ಇನ್ನಷ್ಟು ವಿಳಂಬವಾಗಬಹುದು. ಇದರಿಂದ ಚುನಾವಣೆಯಲ್ಲಿ ಗೆದ್ದು ವರ್ಷ ದಾಟಿದರೂ ಅಧಿಕಾರ ಅನುಭವಿಸಲು ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.