ADVERTISEMENT

ತಿಪಟೂರು: ಕಳ್ಳಸಾಗಣೆ ಮಾಡುತ್ತಿದ್ದ 119 ರಾಗಿ ಚೀಲ ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:59 IST
Last Updated 3 ಮಾರ್ಚ್ 2026, 5:59 IST
ಅಕ್ರಮ ರಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನಗಳು
ಅಕ್ರಮ ರಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನಗಳು   

ತಿಪಟೂರು: ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ ಲಕ್ಷಾಂತರ ಮೌಲ್ಯದ 119 ರಾಗಿ ಚೀಲಗಳನ್ನು ತಹಶೀಲ್ದಾರ್ ಮೋಹನ್ ಕುಮಾರ್ ನೇತೃತ್ವದ ತಂಡ ನಗರದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.

ನಗರದ ಬಂಡಿಹಳ್ಳಿ ಶೆಟ್ಟಿಕೆರೆ ರಸ್ತೆಯ ಎಡ ಭಾಗದಲ್ಲಿರುವ ಮಠದ ಮರುಳಪ್ಪ ಲೇಔಟ್‌ನಲ್ಲಿ ಅಕ್ರಮವಾಗಿ ಲಾರಿ ಮೂಲಕ ರಾಗಿ ಚೀಲಗಳನ್ನು ತಂದು ಟ್ರ‍್ಯಾಕ್ಟರ್‌ಗೆ ತಂಬಿಸಲಾಗುತ್ತಿದೆ ಎನ್ನುವ ಮಾಹಿತಿ ತಿಳಿದ ತಹಶೀಲ್ದಾರ್ ಹಾಗೂ ಆಹಾರ ನಿರೀಕ್ಷಕ ಮೋಹನ್‌ಕುಮಾರ್ ದಾಳಿ ನಡೆಸಿ ಆಂಧ್ರಪ್ರದೇಶ ಮೂಲದ ಲಾರಿಯನ್ನು ದಾಸ್ತಾನು ಸಮೇತ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ದಾವಣಗೆರೆಯಿಂದ ಲಾರಿಯಲ್ಲಿ ರಾಗಿಯನ್ನು ತಂದು ಟ್ರ‍್ಯಾಕ್ಟರ್‌ಗೆ ತುಂಬಿ ರೈತರ ಹೆಸರಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.

ADVERTISEMENT

ಹಾಲ್ಕುರಿಕೆ ಗ್ರಾಮದ ಸತೀಶ್ ಎಂಬವರು ಮಾರಾಟ ಮಾಡುವ ಉದ್ದೇಶದಿಂದ ದಾವಣಗೆರೆಯಿಂದ ಲಾರಿ ಮೂಲಕ ರಾಗಿ ತಂದಿದ್ದರು ಎನ್ನಲಾಗಿದೆ.

ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ‘ಬಂಡೀಹಳ್ಳಿ ಗೇಟ್ ಬಳಿ ಅಕ್ರಮವಾಗಿ ಲಾರಿಯಿಂದ ಟ್ರ‍್ಯಾಕ್ಟರ್‌ಗೆ ರಾಗಿ ತುಂಬುತ್ತಿರುವ ಮಾಹಿತಿ ಬಂದಿದೆ. ತಕ್ಷಣ ದಾಳಿ ಮಾಡಿದಾಗ ಹಾಲ್ಕುರಿಕೆ ಗ್ರಾಮದ ಸತೀಶ್ ಅವರು ದಾವಣಗೆರೆಯಿಂದ ರಾಗಿ ಮಾರಾಟಕ್ಕೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಟ್ರ‍್ಯಾಕ್ಟರ್ ಹಾಗೂ ಲಾರಿಯನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದರು.

ರಾಗಿ ಚೀಲ ಹಾಗೂ ವಾಹನವನ್ನು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.