ADVERTISEMENT

ಪರಿಸರ ವಿನಾಶ ಕೃತ್ಯ: ಸಿ.ಯತಿರಾಜು

ನೆರಳು ಬೀಳುತ್ತದೆ ಎಂದು ನೂರಾರು ಮರ ಕಡಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 9:07 IST
Last Updated 5 ಆಗಸ್ಟ್ 2020, 9:07 IST
ಮರಗಳನ್ನು ಕಡಿದು ಹಾಕಿರುವುದು
ಮರಗಳನ್ನು ಕಡಿದು ಹಾಕಿರುವುದು   

ಹುಳಿಯಾರು: ‘ಹೋಬಳಿ ವ್ಯಾಪ್ತಿಯ ದೊಡ್ಡಬೆಳವಾಡಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆಸಿದ್ದ ಹೆಬ್ಬೇವು ಸೇರಿದಂತೆ ಇತರೆ ನೂರಾರು ಮರಗಳನ್ನು ತಮ್ಮ ಹೊಲಕ್ಕೆ ನೆರಳು ಬೀಳುತ್ತದೆ ಎಂದು ಕಡಿದು ಹಾಕಿರುವುದು ಇಬ್ಬರು ವ್ಯಕ್ತಿಗಳ ವಿವಾದ ಮಾತ್ರವಲ್ಲ. ಪರಿಸರ ವಿನಾಶಕ ಕೃತ್ಯ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ವಿಜ್ಞಾನ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ದೊಡ್ಡಬೆಳವಾಡಿ ಗ್ರಾಮದ ಕವಿತಾ ಅವರ ಬೇವು, ಹೆಬ್ಬೇವು ಮುಂತಾದ ಮರಗಳನ್ನು ನಾಗರಾಜು ಎಂಬುವರು ಅತಿಕ್ರಮ ಪ್ರವೇಶ ಮಾಡಿ ಯಂತ್ರದಿಂದ ಕೊಯ್ದು ಉರುಳಿಸಿರುವುದು ಅಕ್ಷಮ್ಯ ಮತ್ತು ಕಾನೂನು ವಿರೋಧಿ ಕೃತ್ಯವಾಗಿದೆ ಎಂದು ತುಮಕೂರು ಜಿಲ್ಲಾ ವಿಜ್ಞಾನ ಸಂಘದ ಸಿ.ಯತಿರಾಜು ದೂರಿದ್ದಾರೆ.

‘ಕೃಷಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಭೂಮಂಡಲ ಮೊದಲಿನಂತೆ ಆರೋಗ್ಯಕರ ಪರಿಸ್ಥಿತಿ ಬರಲು ಇರುವ ಏಕೈಕ ಕ್ರಮ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸುವುದು. ಇದು ಯಾವ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ. ಮರಗಿಡಗಳಿಂದ ಮಾತ್ರ ಸಾಧ್ಯ. ಏನೇ ವಿವಾದವಿದ್ದರೂ ಬಗೆಹರಿಸಿಕೊಳ್ಳದೆ ಮರ ಕಡಿದಿರುವುದು ಹೇಯ ಕೃತ್ಯವಾಗಿದೆ’ ಎಂದು ಜಿಲ್ಲಾ ವಿಜ್ಞಾನ ಸಂಘದ ರಾಮಕೃಷ್ಣಪ್ಪ ಖಂಡಿಸಿದ್ದಾರೆ.

ADVERTISEMENT

ಕೃತ್ಯ ಎಸೆಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿಜ್ಞಾನ ಸಂಘಟನೆಗಳ ಎನ್.ಇಂದಿರಮ್ಮ, ಲಂಚ ಮುಕ್ತ ಕರ್ನಾಟಕದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ದೂರು ದಾಖಲು
ಮರಗಳನ್ನು ಕಡಿದು ಹಾಕಿರುವ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಗಳನ್ನು ಕಡಿದಿರುವುದರ ನಷ್ಟ ಪರಿಹಾರವಾಗಿ ಸುಮಾರು ₹2 ಲಕ್ಷ ಕೊಡಿಸುವಂತೆ ದೊಡ್ಡಬೆಳವಾಡಿ ಕವಿತಾ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.