ADVERTISEMENT

ಇಂದು ವಿಶ್ವ ಹೃದಯ ದಿನ: ಹೃದ್ರೋಗದಿಂದ ಶೇ 53ರಷ್ಟು ಸಾವು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 19:30 IST
Last Updated 28 ಸೆಪ್ಟೆಂಬರ್ 2023, 19:30 IST

ತುಮಕೂರು: ಅಸಾಂಕ್ರಾಮಿಕ ರೋಗಗಳಿಂದ ಆಗುವ ಸಾವಿನ ಪ್ರಮಾಣ ಶೇ 37ರಿಂದ ಶೇ 63ಕ್ಕೆ ಹೆಚ್ಚಾಗಿದೆ. ಇದರಲ್ಲಿ ಶೇ 53ರಷ್ಟು ಜನ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. 2030ರ ವೇಳೆಗೆ ಸಾವಿನ ಪ್ರಮಾಣವನ್ನು ಶೇ 50ಕ್ಕೆ ಇಳಿಸಲು ಸೂಚಿಸಿದೆ. ಪಾಶ್ಚಾತ್ಯ ಜೀವನ ಶೈಲಿಯಿಂದ ವಿದೇಶಿಯರಿಗಿಂತ 10 ವರ್ಷ ಮುಂಚಿತವಾಗಿಯೇ ಭಾರತೀಯರು ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಇಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಸೆ. 29ರಂದು ವಿಶ್ವ ಹೃದಯ ದಿನದ ಪ್ರಯುಕ್ತ ವೈದ್ಯಕೀಯ ಸಂಘವು ಎನ್‌ಸಿಡಿಎಸ್‌ ಸಹಯೋಗದಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 30 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ADVERTISEMENT

ಹೃದಯರೋಗ ತಜ್ಞ ಡಾ.ಮುದ್ದುರಂಗಪ್ಪ, ‘ರೋಗ ಬರದಂತೆ ತಡೆಯುವ ಬದಲಾಗಿ ಬಂದ ಮೇಲೆ ಅದನ್ನು ವಾಸಿ ಮಾಡಿಕೊಳ್ಳಲು ಕಷ್ಟ ಪಡುವವರು ಹೆಚ್ಚಿದ್ದಾರೆ. 100 ಜನರಲ್ಲಿ ರಕ್ತದೊತ್ತಡ ಇದ್ದರೆ, 50 ಜನ ಮಾತ್ರ ಪರೀಕ್ಷೆಗೆ ಒಳಗಾಗುತ್ತಾರೆ. ಇದರಲ್ಲಿ 25 ಜನ ಮಾತ್ರ ಕಾಯಿಲೆ ವಾಸಿ ಮಾಡಿಕೊಳ್ಳುತ್ತಾರೆ’ ಎಂದರು.

ಐಎಂಎ ಕಾರ್ಯದರ್ಶಿ ಡಾ.ಮಹೇಶ್, ಮಹಿಳಾ ಪ್ರತಿನಿಧಿ ಡಾ.ಅನಿತಾಗೌಡ, ಡಾ.ನಾಗರಾಜರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.