ತುಮಕೂರು: ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣ ಇಳಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ಮಸೂದೆ ಅನ್ವಯ ಕೇಂದ್ರ ಸರ್ಕಾರ ದಂಡ ಹೆಚ್ಚಳ ಮಾಡಿದ್ದು ಸರಿಯಾಗಿದೆ. ರಾಜ್ಯದಲ್ಲಿ ಹಳೇ ನಿಯಮದ ಪ್ರಕಾರ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅರುಳು ಮರುಳಿನ ನಿರ್ಧಾರ’ ಎಂದು ಟೀಕಿಸಿದರು.
ದಂಡ ಹೆಚ್ಚಳದಿಂದ ಜನರಲ್ಲಿ ಭಯ ಮೂಡುತ್ತದೆ. ಕಾನೂನು ಭಯದಿಂದ ಸಂಚಾರ ನಿಯಮವನ್ನು ಪಾಲಿಸುವರು. ವಿದೇಶಗಳಲ್ಲಿ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ದಂಡ ವಿಧಿಸಲಾಗುತ್ತದೆ. ಎರಡು ಬಾರಿ ಅಪಘಾತ ಮಾಡಿದರೆ ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸುವರು. ವಾಹನ ಚಾಲನಾ ಪರವಾನಗಿ ರದ್ದು ಮಾಡುತ್ತಾರೆ. ಈ ಕಾರಣಕ್ಕೆ ಅಲ್ಲಿನ ಜನರಿಗೆ ಕಾನೂನಿನ ಭಯ ಇದೆ. ಆ ನಿಯಮಗಳನ್ನೇ ಇಲ್ಲಿಯೂ ಜಾರಿಗೊಳಿಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸಬಹುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.