ತುಮಕೂರು: ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡುವ ವ್ಯವಸ್ಥೆ ಮಾಡಬೇಕು. ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಬೇಕು ಎಂದು ಜನಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಪಂಡಿತ್ ಜವಾಹರ್ ಆಗ್ರಹಿಸಿದ್ದಾರೆ.
ಕಳೆದ ಒಂಬತ್ತು ತಿಂಗಳಿಂದ ಪ್ಯಾಸೆಂಜರ್ ಹಾಗೂ ಸಾಮಾನ್ಯ ರೈಲುಗಳು ಸಂಚರಿಸದೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದುಬಾರಿ ಹಣಕೊಟ್ಟು ಬಸ್ಗಳಲ್ಲಿ ಜನರು ಓಡಾಡುವಂತಾಗಿದೆ. ಇದರಿಂದ ದಿನನಿತ್ಯ ಬೆಂಗಳೂರಿಗೆ ಹೋಗಿ ಬರುವವರು, ವ್ಯಾಪಾಸ್ಥರು, ರೈತರು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ ಎಂದು ತಿಳಿಸಿದ್ದಾರೆ.
ಈಗ ಸಂಚರಿಸುತ್ತಿರುವ ಕೆಲವು ರೈಲುಗಳಿಗೂ ಕೊರೊನಾ ಭಯದಿಂದಾಗಿ ನಿಲ್ದಾಣದಲ್ಲಿ ಟಿಕೆಟ್ ಕೊಡುತ್ತಿಲ್ಲ. ಆನ್ಲೈನ್ನಲ್ಲೇ ಟಿಕೆಟ್ ಪಡೆದುಕೊಳ್ಳಬೇಕು. ಜತೆಗೆ ಪ್ರತಿ ಟಿಕೆಟ್ಗೆ ₹15ರಿಂದ ₹20 ಹೆಚ್ಚಿಗೆ ಕೊಡಬೇಕಾಗಿದೆ. ಇಂಟರ್ನೆಟ್ ಸರಿಯಾಗಿ ಕೆಲಸ ನಿರ್ವಹಿಸದೆ ಸಮಯಕ್ಕೆ ಸರಿಯಾಗಿ ಟಿಕೆಟ್ ಪಡೆಯಲು ಆಗುತ್ತಿಲ್ಲ. ಸಾಕಷ್ಟು ಜನರ ಬಳಿ ಅತ್ಯಾಧುನಿಕ ಸೌಕರ್ಯ ಇರುವ ಮೊಬೈಲ್ ಫೋನ್ಗಳು ಇರುವುದಿಲ್ಲ. ಹಾಗಾಗಿ ತಕ್ಷಣ ಟಿಕೆಟ್ ಕೊಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕೇಂದ್ರದ ಮುಂದೆ ಮಾಸ್ಕ್ ಧರಿಸದೆ, ಯಾವುದೇ ಮುನ್ನೆಚ್ಚರಿಕೆ ವಹಿಸದೆ ಸೇರಿದ್ದ ಜನಸಂದಣಿಯನ್ನು ಗಮನಿಸಿದರೆ ರೈಲ್ವೆ ಇಲಾಖೆಗೆ ಏಕೆ ಇಂತಹ ನಿಲುವು ಎಂದು ಪ್ರಶ್ನಿಸಬೇಕಾಗುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.