
ಕುಣಿಗಲ್: ತಾಲ್ಲೂಕಿನ ದಯಾಕಿರಣ ದತ್ತು ಕೇಂದ್ರ ಮುಂದೆ ಇಟ್ಟಿರುವ ಮಮತೆಯ ತೊಟ್ಟಿಲಿನಲ್ಲಿ ನವಜಾತ ಗಂಡು ಮಗುವನ್ನು ಅಪರಿಚಿತರು ಭಾನುವಾರ ಬಿಟ್ಟುಹೋಗಿದ್ದಾರೆ.
ದಯಾಕಿರಣ ಸಂಯೋಜಕ ರಮೇಶ್ ಕುಣಿಗಲ್ ಅವರು ಪೊಲೀಸ್ ಠಾಣೆಗೆ ದೂರು ನೀಡಿ ಮುಂದಿನ ಕ್ರಮ ಕೈಗೊಂಡು ಮಗುವಿನ ಸಂರಕ್ಷಣೆಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ತಾಯಂದಿರಿಂದ ಪರಿತ್ಯಕ್ತ ಮಕ್ಕಳು ಕಸದ ತೊಟ್ಟಿ, ಬೇಲಿ ಬದಿ, ಪಾಳುಬಿದ್ದ ಬಾವಿಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ದಯಾಭವನ ಸಂಸ್ಥೆ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಸಹಯೋಗದಲ್ಲಿ ಹುಟ್ಟಿದ ಮಗು ಕಸದ ತೊಟ್ಟಿಗಲ್ಲ, ಮಮತೆಯ ತೊಟ್ಟಿಲಿಗೆ ಎಂಬ ಯೋಜನೆ ಜಾರಿಗೆ ತಂದಿತ್ತು. ಜಿಲ್ಲಾಸ್ಪತ್ರೆ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತೊಟ್ಟಿಲುಗಳನ್ನಿಟ್ಟು, ಬೇಡವಾದ ಮಕ್ಕಳನ್ನು ಬಿಸಾಕುವ ಬದಲು ಮಮತೆಯ ತೊಟ್ಟಿಲಿಗಿಡಲು ಮನವಿ ಮಾಡಲಾಗಿತ್ತು.
ದಯಾಕಿರಣ ದತ್ತು ಕೇಂದ್ರದ ಮಮತೆಯ ತೊಟ್ಟಿಲಿಗೆ ಇದುವರೆಗೂ ಮೂರು ಮಕ್ಕಳನ್ನು ತಂದು ಹಾಕಿದ್ದು, ಮಕ್ಕಳನ್ನು ಸಂರಕ್ಷಣೆ ಮಾಡಿ ಪೋಷಣೆ ಮಾಡಲಾಗುತ್ತಿದೆ ಎಂದು ದಯಾಭವನ ಸಂಯೋಜಕ ರಮೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.