ADVERTISEMENT

ಡಿಜಿಟಲ್‌ ಅರೆಸ್ಟ್‌ | ಪ್ರತ್ಯೇಕ ಪ್ರಕರಣ: ₹1.11 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:26 IST
Last Updated 19 ಜನವರಿ 2026, 6:26 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಸೈಬರ್‌ ಆರೋಪಿಗಳು ಜಿಲ್ಲೆಯ ಇಬ್ಬರಿಗೆ ₹1.11 ಕೋಟಿ ವಂಚಿಸಿದ್ದು, ಈ ಕುರಿತು ಸೈಬರ್‌ ಠಾಣೆಯಲ್ಲಿ ಒಂದು ದಿನದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಡಿಜಿಟಲ್‌ ಅರೆಸ್ಟ್‌ ಮಾಡುವುದಾಗಿ ಬೆದರಿಸಿ ನಗರದ ಸೋಮೇಶ್ವರ ಪುರಂನ ಕೆ.ಎಸ್‌.ಜಗನ್ನಾಥ ಎಂಬುವರಿಗೆ ₹48.55 ಲಕ್ಷ ವಂಚಿಸಲಾಗಿದೆ. ಜ. 9ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮುಂಬೈನ ಅಂಬೋಲಿ ಠಾಣೆ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ.

‘ನಿಮ್ಮ ದಾಖಲೆ ಬಳಸಿ ಅಬು ಸಲೀಂ ಎಂಬ ಭಯೋತ್ಪಾದಕ ಮುಂಬೈನ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೆ. ಖಾತೆಯಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಹೂಡಿಕೆ ಮಾಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ.

ADVERTISEMENT

ನಿಮಗೆ ಮುಂಬೈಗೆ ಬರಲು ಆಗದಿದ್ದರೆ ಮೊಬೈಲ್‌ನಲ್ಲಿ ಅಗತ್ಯ ಮಾಹಿತಿ ನೀಡಿ ಎಂದಿದ್ದು, ಅದರಂತೆ ಜಗನ್ನಾಥ ಬ್ಯಾಂಕ್‌ ವಿವರ, ಹಣ, ಆಸ್ತಿ ಕುರಿತು ಹೇಳಿದ್ದಾರೆ. ಮೊದಲಿಗೆ ₹6.10 ಲಕ್ಷ ಠೇವಣಿ ಇಡಬೇಕು, ತನಿಖೆ ನಂತರ ಹಣ ವಾಪಸ್‌ ನೀಡಲಾಗುವುದು.  ಇದನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ, ನಿಮ್ಮ ಕುಟುಂಬಕ್ಕೆ ಪ್ರಾಣ ಭಯ ಇದೆ ಎಂದು ಎಂದಿದ್ದಾರೆ. ಪ್ರತಿ ದಿನ ವಾಟ್ಸ್‌ ಆ್ಯಪ್‌ ಕರೆ ಮಾಡಿ ಮಾತನಾಡಿದ್ದಾರೆ.

ಜ. 13ರಂದು ಠೇವಣಿ ಹಣವೆಂದು ಮತ್ತೆ ₹2,45,201 ಪಡೆದಿದ್ದಾರೆ. ಜ. 16ರಂದು ಕರೆ ಮಾಡಿ, ‘ನಿಮಗೆ ಭಯೋತ್ಪಾದಕರ ಜತೆ ಲಿಂಕ್‌ ಇದೆಯೋ, ಇಲ್ಲವೋ ಎಂದು ತಿಳಿಯಲು ಮತ್ತಷ್ಟು ತನಿಖೆ ಮಾಡಬೇಕು. ಇದಕ್ಕಾಗಿ ₹70 ಲಕ್ಷ ಠೇವಣಿ ಇಡಬೇಕು, ಜ. 17ರಂದು ನಿಮ್ಮ ಪೂರ್ತಿ ಹಣ ವಾಪಸ್‌ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಜಗನ್ನಾಥ ₹40 ಲಕ್ಷ ವರ್ಗಾಯಿಸಿದ್ದಾರೆ.

ಜ. 17ರಂದು ಆರೋಪಿಗಳು ಕರೆ ಮಾಡಿಲ್ಲ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಸೈಬರ್‌ ವಂಚನೆಗೆ ಒಳಗಾದ ವಿಚಾರ ತಿಳಿದಿದೆ. ಜಗನ್ನಾಥ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

₹63 ಲಕ್ಷ ಕಳೆದುಕೊಂಡ ರೈಲ್ವೆ ಉದ್ಯೋಗಿ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತುರುವೇಕೆರೆ ರೈಲ್ವೆ ಉದ್ಯೋಗಿ ಬಿ.ಕೆ.ಪ್ರವೀಣ್‌ಕುಮಾರ್‌ ₹63.20 ಲಕ್ಷ ಕಳೆದುಕೊಂಡಿದ್ದಾರೆ. ‘V5 New Book Discussion Group’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಪ್ರವೀಣ್‌ ಅವರ ನಂಬರ್‌ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಲಾಭ ಬಂದಿರುವ ಕುರಿತು ಕೆಲವರು ತಿಳಿಸಿದ್ದಾರೆ. ಪ್ರವೀಣ್‌ ಇದನ್ನು ನಂಬಿ ಹಣ ಹೂಡಿಕೆ ಮಾಡಿದ್ದಾರೆ. https://m.capstone-in.com/register?u://11548918 ಲಿಂಕ್‌ ಕ್ಲಿಕ್‌ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ಸೈಬರ್‌ ವಂಚಕರ ಮಾತು ಕೇಳಿ 2025ರ ಡಿ. 31ರಿಂದ ಜ. 16ರ ವರೆಗೆ ಹಂತ ಹಂತವಾಗಿ ಒಟ್ಟು ₹63.20 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಮತ್ತಷ್ಟು ವರ್ಗಾವಣೆ ಮಾಡಿದರೆ ಮಾತ್ರ ಪೂರ್ತಿ ಹಣ ವಾಪಸ್‌ ನೀಡಲಾಗುವುದು ಎಂದು ಆರೋಪಿಗಳು ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಸೈಬರ್‌ ಠಾಣೆಗೆ ಪ್ರವೀಣ್‌ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮೆಗಾ ಗ್ಯಾಸ್‌ ಹೆಸರಲ್ಲಿ ಮೋಸ

ಮೆಗಾ ಗ್ಯಾಸ್‌ ಹೆಸರಿನಲ್ಲಿ ನಗರದ ಕ್ಯಾತ್ಸಂದ್ರದ ನಿವೃತ್ತ ಶಿಕ್ಷಕಿ ಮಹಾದೇವಮ್ಮ ಎಂಬುವರಿಗೆ ₹5.69 ಲಕ್ಷ ವಂಚಿಸಲಾಗಿದೆ. ಜ. 16ರಂದು ಕರೆ ಮಾಡಿದ ಆರೋಪಿಗಳು ಮೆಗಾ ಗ್ಯಾಸ್‌ ಕಂಪನಿ ಸಿಬ್ಬಂದಿ ಎಂದು ಮಾತನಾಡಿದ್ದಾರೆ. ‘ಗ್ಯಾಸ್‌ ಸಂಪರ್ಕದ ಕುರಿತು ಅಪ್‌ಡೇಟ್‌ ಮಾಡಿಸಿಲ್ಲ. ಕೂಡಲೇ ಅಪ್‌ಡೇಟ್‌ ಮಾಡಿಸಿ ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದು ತಿಳಿಸಿ ಎಪಿಕೆ ಫೈಲ್‌ ಕಳುಹಿಸಿದ್ದರು. ಮಹಾದೇವಮ್ಮ ಎಪಿಕೆ ಫೈಲ್‌ ಡೌನ್‌ಲೋಡ್‌ ಮಾಡಿದ್ದಾರೆ. ಜ. 17ರಂದು ಅವರ ಖಾತೆಯಿಂದ ಐದು ಬಾರಿ ಹಂತ ಹಂತವಾಗಿ ₹569105 ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಗ್ಯಾಸ್‌ ಅಪ್‌ಡೇಟ್‌ ಹೆಸರಿನಲ್ಲಿ ನಂಬಿಸಿ ಹಣ ವರ್ಗಾವಣೆ ಮಾಡಿಕೊಂಡ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ನಿವೃತ್ತ ಶಿಕ್ಷಕಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.