ADVERTISEMENT

ತುಮಕೂರು | ತೋಟಗಾರಿಕೆ ಜಾಗದಲ್ಲಿ ಡಿ.ಸಿ ಕಚೇರಿ

ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 3.20 ಎಕರೆ ಮೀಸಲು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:50 IST
Last Updated 20 ಸೆಪ್ಟೆಂಬರ್ 2025, 5:50 IST
ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ
ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ   

ತುಮಕೂರು: ನಗರದ ಹೃದಯ ಭಾಗವಾದ ಸೋಮೇಶ್ವರಪುರಂನಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ 3 ಎಕರೆ 20 ಗುಂಟೆ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿರುವುದು ರೈತರಿಂದ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದಲ್ಲಿ ಹೊಸದಾಗಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಆರಂಭವಾಗಿದ್ದು, ಅದಕ್ಕಾಗಿ ಜಮೀನಿನ ಹುಡುಕಾಟ ನಡೆದಿತ್ತು. ವಿಶಾಲವಾದ, ಮುಂದಿನ ಬೆಳವಣಿಗೆ ದೃಷ್ಟಿಯನ್ನು ಇಟ್ಟುಕೊಂಡು ಜಾಗ ನೀಡುವ ಬದಲಿಗೆ ತೋಟಗಾರಿಕೆ ಇಲಾಖೆ ಕಚೇರಿ ಇರುವ ಪುಟ್ಟ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ.

ತೋಟಗಾರಿಕೆ ಇಲಾಖೆ ಕಚೇರಿ, ನರ್ಸರಿ ಹಾಗೂ ಇಲಾಖೆಗೆ ಸಂಬಂಧಿಸಿದ ಚಟುವಟಿಕೆ ನಡೆಯುತ್ತಿರುವ 3 ಎಕರೆ 20 ಗುಂಟೆ ಜಾಗವನ್ನು ಈವರೆಗೂ ಇಲಾಖೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ. ಪಹಣಿಯಲ್ಲಿ ಇಂದಿಗೂ ಸರ್ಕಾರಿ ಖರಾಬು ಎಂದೇ ಬರುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಪಹಣಿಯಲ್ಲಿ ‘ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸುವ ಉದ್ದೇಶಕ್ಕಾಗಿ’ ಎಂದು ಸೆ. 1ರಂದು ನಮೂದಿಸಿ, ತಿದ್ದುಪಡಿಸಿ ಮಾಡಲಾಗಿದೆ.

ADVERTISEMENT

ಹಿನ್ನೆಲೆ: ಈ ಹಿಂದೆ ಸೋಮೇಕಟ್ಟೆ ಪ್ರದೇಶದ ಸರ್ವೆ ನಂ 63ರಲ್ಲಿ 19 ಎಕರೆ 2 ಗುಂಟೆ ಜಮೀನಿನಲ್ಲಿ 18 ಎಕರೆ 27 ಗುಂಟೆ ಸರ್ಕಾರಿ ಖರಾಬು ಎಂದು ಗುರುತಿಸಲಾಗಿತ್ತು. ಅದರಲ್ಲಿ 3 ಎಕರೆ 20 ಗುಂಟೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ತುಮಕೂರು ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ) ಮಂಜೂರು ಮಾಡಿದ್ದು, 1953ರ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಜತೆಗೆ ಜಿಲ್ಲಾ ಗೊಲ್ಲ ಜನಾಂಗದ ವಿದ್ಯಾರ್ಥಿ ನಿಲಯಕ್ಕೆ 5 ಎಕರೆ ಮಂಜೂರು ಮಾಡಲಾಗಿದೆ. ಜಾಗ ಮಂಜೂರು ಮಾಡಿ ಏಳು ದಶಕಗಳು ಕಳೆದಿದ್ದರೂ ತೋಟಗಾರಿಕೆ ಇಲಾಖೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ತನ್ನ ಜಾಗವನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದೆ.

ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರೆ ದಶಕಗಳಿಂದ ಚಟುವಟಿಕೆ ನಡೆಸಿಕೊಂಡು ಬಂದಿದ್ದ ತೋಟಗಾರಿಕೆ ಇಲಾಖೆ ತನ್ನ ಅಸ್ತಿತ್ವ ಕಳೆದುಕೊಳ್ಳಬೇಕಾಗಿದೆ. 3.20 ಎಕರೆಯಲ್ಲಿ ಸುಮಾರು 1 ಎಕರೆಯಲ್ಲಿ ಇಲಾಖೆ ಕಚೇರಿ ಕಟ್ಟಡ ಇದೆ. ಉಳಿದ ಜಾಗದಲ್ಲಿ ನರ್ಸರಿ, ಪಾಲಿಹೌಸ್ ನಿರ್ಮಿಸಲಾಗಿದೆ. ಇದೇ ಜಾಗವನ್ನು ಬಳಸಿಕೊಂಡು ರೈತರಿಗೆ ತರಬೇತಿ ನೀಡಲಾಗುತ್ತಿದೆ. ವರ್ಷಪೂರ್ತಿ ಒಂದಲ್ಲೊಂದು ತರಬೇತಿ, ರೈತರ ಪರವಾದ ಕೆಲಸಗಳು ನಡೆಯುತ್ತಿರುತ್ತವೆ. ಇದೇ ಜಾಗದಲ್ಲಿ ಪ್ರತಿ ವರ್ಷವೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈಗ ಜಾಗ ಕಳೆದುಕೊಂಡರೆ ರೈತರಿಗೆ ಮಾಹಿತಿ ನೀಡುವಂತಹ ಚಟುವಟಿಕೆ ನಡೆಸುವುದು ಕಷ್ಟಕರವಾಗುತ್ತದೆ.

ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಗಿಡ ಬೆಳೆಸಿರುವುದು
ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ ಹೊರನೋಟ
ಡಿ.ಸಿ ಕಚೇರಿಗೆ ಸೂಕ್ತ ಜಾಗವೇ?
ಎಸ್‌.ಎಸ್.ಪುರಂನಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಜಾಗ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಿಸಲು ಸೂಕ್ತ ಜಾಗವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಜಾಗ ಬಿ.ಎಚ್.ರಸ್ತೆಗೆ ಹೊಂದಿಕೊಂಡಿದ್ದು ಎಸ್.ಎಸ್.ಪುರಂನ ಯಾವ ರಸ್ತೆಯೂ ವಿಶಾಲವಾಗಿಲ್ಲ. ಒಂದು ಕಾರು ತೆರಳುವ ಸಮಯದಲ್ಲಿ ಎದುರಿಗೆ ಮತ್ತೊಂದು ಕಾರು ಬಂದರೆ ಜಾಗ ಮಾಡಿಕೊಡುವುದೇ ಕಷ್ಟಕರವಾಗಿದೆ. ಇಂತಹ ಕಿಷ್ಕಿಂದೆಯಂತಿರುವ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿದರೆ ವಾಹನಗಳ ದಟ್ಟಣೆ ಹೆಚ್ಚಾದರೆ ಸುಗಮ ಸಂಚಾರ ಸಾಧ್ಯವೇ? ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರತಿ ದಿನ ಪ್ರತಿ ಕ್ಷಣವೂ ಟ್ರಾಫಿಕ್ ಜಾಮ್‌ನಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಎಂದ ಮೇಲೆ ಚಟುವಟಿಕೆಗಳು ಹೆಚ್ಚು ಜನರ ಭೇಟಿಯೂ ಅಧಿಕ. ಅಂತಹ ಸಮಯದಲ್ಲಿ ಸಂಚಾರ ದಟ್ಟಣೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ ಎಂಬ ಆಕ್ಷೇಪಣೆಗಳು ಕೇಳಿ ಬಂದಿವೆ. ನಗರದ ಪ್ರಗತಿ ಹಾಗೂ ಜನಸಂಖ್ಯೆಯ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡುವುದಾದರೆ ಜಿಲ್ಲಾಧಿಕಾರಿ ಕಚೇರಿಗೆ ಎಂಟತ್ತು ಎಕರೆಯಷ್ಟು ವಿಶಾಲವಾದ ಜಾಗ ಬೇಕಾಗುತ್ತದೆ. ಅಂತಹ ಸ್ಥಳವನ್ನು ಪತ್ತೆಮಾಡಿ ಮಂಜೂರು ಮಾಡುವ ಬದಲು ಮುಂದಾಲೋಚನೆ ಇಲ್ಲದೆ ಪುಟ್ಟ ಜಾಗವನ್ನು ನೀಡಿ ಮುಂದೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿಕೊಳ್ಳಲಾಗುತ್ತಿದೆ ಎಂದು ಈ ಯೋಜನೆಯ ಒಳಹೊರಗನ್ನೂ ಬಲ್ಲವರು ಹೇಳುತ್ತಿದ್ದಾರೆ.
ರದ್ದು ಕೋರಿ ನಿರ್ಣಯ
ನಗರದಲ್ಲಿ ಶುಕ್ರವಾರ ನಡೆದ ಹಾಪ್‌ಕಾಮ್ಸ್ ಸರ್ವ ಸದಸ್ಯರ ಸಭೆಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಲು ಮಂಜೂರು ಮಾಡಿರುವುದನ್ನು ಖಂಡಿಸಲಾಯಿತು. ನಿರ್ದೇಶಕ ಕಾಮರಾಜ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪಹಣಿಯಲ್ಲಿ ಮಾಡಿರುವ ತಿದ್ದುಪಡಿ ವಾಪಸ್ ಪಡೆಯಬೇಕು. ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಬಾರದು. ಈ ಸ್ಥಳವನ್ನು ರೈತರ ಚಟುವಟಿಕೆಗಳಿಗೆ ಮೀಸಲಿಡಬೇಕು. ತೆಗೆದುಕೊಂಡಿರುವ ನಿರ್ಧಾರ ರದ್ದುಪಡಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.