ADVERTISEMENT

ತುಮಕೂರು: ಎಂಜಿನಿಯರ್‌ಗೆ ₹13 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:52 IST
Last Updated 1 ಅಕ್ಟೋಬರ್ 2025, 7:52 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿ, ಮನೆಯಲ್ಲಿ ಕುಳಿತುಕೊಂಡು ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿ ತಿಪಟೂರಿನ ವಿದ್ಯಾನಗರದ ಎಂಜಿನಿಯರ್‌ ಎ.ಎಸ್‌.ದರ್ಶನ್‌ ಕುಮಾರ್‌ ಎಂಬುವರಿಗೆ ₹13.58 ಲಕ್ಷ ವಂಚಿಸಲಾಗಿದೆ.

ವಾಟ್ಸ್‌ ಆ್ಯಪ್‌ನಲ್ಲಿ ಮೆಸೇಜ್‌ ಮಾಡಿದ ಅಪರಿಚಿತರು ಟಾಸ್ಕ್‌ ಬಗ್ಗೆ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾ ಹಣ ಗಳಿಸಬಹುದು ಎಂದಿದ್ದಾರೆ. ನಂತರ ಟೆಲಿಗ್ರಾಮ್‌ ಗ್ರೂಪ್‌ಗೆ ಅವರ ನಂಬರ್‌ ಸೇರಿಸಿದ್ದಾರೆ. ಆರೋಪಿಗಳು ಹೇಳಿದಂತೆ ದರ್ಶನ್‌ ತಮ್ಮ ಬ್ಯಾಂಕ್‌ ಖಾತೆ ಅಪ್‌ಡೇಟ್‌ ಮಾಡಿಸಿದ್ದಾರೆ.

‘ನಿಮ್ಮ ಪರವಾಗಿ ಆನ್‌ಲೈನ್‌ನಲ್ಲಿ ವಸ್ತುಗಳ ಖರೀದಿ ಹಾಗೂ ಮಾರಾಟ ಮಾಡುತ್ತೇವೆ. ಇದಕ್ಕಾಗಿ ಹಣ ಹೂಡಿಕೆ ಮಾಡಬೇಕು’ ಎಂದು ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿ ಮೊದಲ ಬಾರಿಗೆ ₹10 ಸಾವಿರ ವರ್ಗಾಯಿಸಿದ್ದು, ಅವರ ಖಾತೆಗೆ ₹2 ಸಾವಿರ ಲಾಭಾಂಶ ಎಂದು ವಾಪಸ್‌ ಹಾಕಿದ್ದಾರೆ.

ADVERTISEMENT

ಇನ್ನೂ ಹೆಚ್ಚಿನ ಹಣ ವರ್ಗಾವಣೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ದರ್ಶನ್‌ ಹಂತ ಹಂತವಾಗಿ ಒಟ್ಟು ₹13,58,952 ವರ್ಗಾಯಿಸಿದ್ದಾರೆ. ಹಣ ವಾಪಸ್‌ ಕೇಳಿದಾಗ ಇನ್ನೂ ₹11 ಲಕ್ಷ ವರ್ಗಾಯಿಸಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು ಎಂದು ಆರೋಪಿಗಳು ತಿಳಿಸಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂಬುವುದು ಗೊತ್ತಾಗಿದೆ.

ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾ, ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದರ್ಶನ್‌ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.