ADVERTISEMENT

ತುಮಕೂರು | ಹೊಲದಲ್ಲಿ ಮೂಡದ ತೆನೆ; ಕಟ್ಟದ ಕಾಳು

ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ; ಆಹಾರ ಧಾನ್ಯ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:43 IST
Last Updated 10 ಅಕ್ಟೋಬರ್ 2025, 5:43 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಈ ಬಾರಿಗೂ ರೈತರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ರಾಗಿ ಸೇರಿದಂತೆ ಇತರೆ ಬೆಳೆಗಳು ತೆನೆಯೊಡೆದು ಕಾಳುಕಟ್ಟುವ ಹೊತ್ತಿನಲ್ಲೇ ವರುಣ ಮರೆಯಾಗಿದ್ದಾನೆ. ಉಷ್ಣಾಂಶ ಏರಿಕೆಯಾಗದೆ, ತಾಪಮಾನ ಕಡಿಮೆ ಇರುವುದರಿಂದ ಹೊಲದಲ್ಲಿ ಬೆಳೆಗಳು ಹಸಿರಾಗಿ ಕಾಣಿಸುತ್ತಿವೆ. ಆದರೆ ತೆನೆ ಮಾತ್ರ ಮೂಡಿಲ್ಲ.

ಮುಂಗಾರಿನಲ್ಲಿ 1,51,375 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದು, ಸುಮಾರು 1.50 ಲಕ್ಷ ಹೆಕ್ಟೇರ್ ವರೆಗೆ ಬಿತ್ತನೆಯಾಗಿದೆ. ಶೇಂಗಾ 76,570 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 42 ಸಾವಿರ ಹೆಕ್ಟೇರ್ ವರೆಗೆ ಬಿತ್ತನೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದರಿಂದ ರೈತರು ರಾಗಿ, ಶೇಂಗಾ ಹಾಗೂ ಇತರೆ ಧಾನ್ಯ ಬಿತ್ತನೆ ಮಾಡಿದ್ದರು. ಮುಂದಿನ ದಿನಗಳಲ್ಲಾದರೂ ಸಕಾಲಕ್ಕೆ ಮಳೆಯಾದರೆ ನಾಲ್ಕು ಕಾಳು ನೋಡುವ ಆಸೆ ಹೊತ್ತಿದ್ದರು.

ADVERTISEMENT

ಈಗ ರೈತರ ನಿರೀಕ್ಷೆ ಹುಸಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ವರುಣ ಮುನಿಸಿಕೊಂಡಿದ್ದಾನೆ. ರೈತರು ಬಡಿದಾಟ ಮಾಡಿಕೊಂಡು ರಸಗೊಬ್ಬರ ತಂದು ಹೊಲಕ್ಕೆ ಹಾಕಿದ್ದಾರೆ. ತೆನೆಯೊಡೆದು ಕಾಳು ಕಟ್ಟುವ ಹಂತ ತಲುಪಿದ ಸಮಯದಲ್ಲೇ ಮಳೆ ಇಲ್ಲದೆ ತೆನೆ ಮೂಡಿಲ್ಲ. ಈ ಹೊತ್ತಿಗಾಗಲೇ ತೆನೆಮೂಡಿ, ಕಾಳು ಕಟ್ಟುವ ಹಂತ ಆರಂಭವಾಗಬೇಕಿತ್ತು. ಆದರೆ ಸಾಕಷ್ಟು ಭಾಗದಲ್ಲಿ ಇನ್ನೂ ತೆನೆಯೊಡೆದಿಲ್ಲ. ಒಂದು ಭಾಗದಲ್ಲಿ ಮಳೆಯಾಗಿದ್ದರೆ, ಪಕ್ಕದ ಹಳ್ಳಿಯಲ್ಲಿ ಬಿದ್ದಿರುವುದಿಲ್ಲ. ಮುಂದೆ ಬಿದ್ದು ತೆನೆಯೊಡೆದರೂ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ.

ಶೇಂಗಾ ಸಹ ಇಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಾಯಿ ಕಟ್ಟುವ ಹಂತದಲ್ಲಿ ಮರೆಯಾಗಿದೆ. ಗಿಡದಲ್ಲಿ ಎಣಿಕೆಗೆ ಒಂದೆರಡು ಕಾಯಿ ಕಾಣಿಸುತ್ತಿದೆ. ಅದೂ ಗಟ್ಟಿಯಾಗಿಲ್ಲ, ಎಲ್ಲವೂ ಜೊಳ್ಳು ಎಂದು ಪಾವಗಡ ಭಾಗದ ರೈತರು ಹೇಳುತ್ತಿದ್ದಾರೆ. ಜೂನ್‌ನಲ್ಲಿ ಬಿತ್ತನೆ ಮಾಡಿದ ಶೇಂಗಾ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ತಡವಾಗಿ ಬಿತ್ತನೆಯಾಗಿರುವುದು ಅಡಕತ್ತರಿಗೆ ಸಿಲುಕಿದೆ.

ಕಣ್ಣಾಮುಚ್ಚಾಲೆ: ಈ ಬಾರಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಹೈರಾಣಾಗಿದ್ದಾರೆ. ಯಾವಾಗ ಮಳೆ ಬರುತ್ತದೆ ಎಂದು ನಿರೀಕ್ಷೆ ಮಾಡುವುದೇ ಕಷ್ಟಕರವಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರದ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಆದರೆ ಇಲ್ಲಿ ಗಟ್ಟಿಯಾಗಿ ನಾಲ್ಕು ಹನಿ ಬೀಳುತ್ತಿಲ್ಲ. ನಮಗೆ ಮೋಸ ಮಾಡಿತು ಎಂದು ರೈತರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮುಂಗಾರು ಆರಂಭದಲ್ಲಿ ಆರ್ಭಟಿಸಿದರೂ ನಂತರ ಕೈಕೊಟ್ಟಿದ್ದೇ ಹೆಚ್ಚು. ಜೂನ್‌ನಲ್ಲಿ ಸ್ವಲ್ಪ ಮಟ್ಟಿಗೆ ಬಿದ್ದರೂ, ಜುಲೈನಲ್ಲಿ ಮರೆಯಾಯಿತು. ಆಗಸ್ಟ್‌ನಲ್ಲಿ ಬಿತ್ತನೆಗೆ ನೆರವಾಯಿತು. ಮತ್ತೆ ಸೆಪ್ಟೆಂಬರ್‌ನಲ್ಲಿ ವಾತಾವರಣ ತಂಪಾಗಿದ್ದನ್ನು ಬಿಟ್ಟರೆ ಹನಿಗಳು ನೆಲ ನೋಡಲಿಲ್ಲ. ಅಕ್ಟೋಬರ್‌ ಆರಂಭವಾಗಿ ಒಂದು ವಾರ ಕಳೆದಿದ್ದರೂ ಸಮರ್ಪಕವಾಗಿ ಬಿದ್ದಿಲ್ಲ. ಕೆಲವು ಕಡೆ ಮಳೆಯಾಗಿದ್ದರೆ, ಮತ್ತೆ ಕೆಲವು ಕಡೆ ಬಿದ್ದಿಲ್ಲ. ಮುಂಗಾರು ಅವಧಿ ಮುಗಿದು, ಹಿಂಗಾರು ಕಾಲಿಟ್ಟಿದೆ. ಮುಂದೇನು ಎಂಬ ಆತಂಕ ಕಾಡುತ್ತಲೇ ಇದೆ.

ತೀವ್ರ ಕೊರತೆ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪಾವಗಡ (ಶೇ 71) ಶಿರಾ ಚಿಕ್ಕನಾಯಕನಹಳ್ಳಿ (ಶೇ 54) ಮಧುಗಿರಿ (ಶೇ 53) ಗುಬ್ಬಿ (ಶೇ 46) ಕೊರಟಗೆರೆ (ಶೇ 43) ತಾಲ್ಲೂಕಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಯಾವ ತಾಲ್ಲೂಕಿನಲ್ಲೂ ವಾಡಿಕೆಯಷ್ಟು ಬಿದ್ದಿಲ್ಲ. ಒಮ್ಮೆಲೆ ಜೋರು ಮಳೆ ಬಿದ್ದು ನಂತರ ಕಣ್ಮರೆಯಾಗಿದೆ. ಇದು ಬಿತ್ತನೆ ಬೆಳವಣಿಗೆ ಇಳುವರಿಗೆ ಸಹಕಾರಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.