
ತುಮಕೂರು: ಮಹಾಶಿವರಾತ್ರಿ ಆಚರಣೆಗೆ ನಗರ ಸೇರಿದಂತೆ ಎಲ್ಲೆಡೆ ದೇಗುಲಗಳು ಸಜ್ಜುಗೊಂಡಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ಶಿವನ ಆರಾಧನೆ ಆರಂಭವಾಗಲಿದೆ.
ನಗರದ ಭದ್ರಮ್ಮ ಛತ್ರ ವೃತ್ತದ ಬಳಿಯ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಸಹಸ್ರ ಕಲಶಾಭಿಷೇಕ ಏರ್ಪಡಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ಕಲಶಾಭಿಷೇಕ ನೆರವೇರಲಿದೆ. ಬೆಳಗಿನ ಜಾವ 4.30 ಗಂಟೆಯಿಂದ 6ರ ವರೆಗೆ, ಮಧ್ಯಾಹ್ನ 3ರಿಂದ 4.30ರ ವರೆಗೆ ರುದ್ರಾಭಿಷೇಕ ನಡೆಯಲಿದೆ. ಕ್ಷೀರಾಭಿಷೇಕಕ್ಕೂ ಅವಕಾಶ ಕಲ್ಪಿಸಿದೆ.
ಶಿವರಾತ್ರಿಯ ಇಡೀ ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ರಾತ್ರಿ ಜಾಗರಣೆ ಇರಲಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಯಾರಿಗೂ ತೊಂದರೆಯಾಗದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡುತ್ತಿದ್ದ ದೃಶ್ಯಗಳು ಶನಿವಾರ ಕಂಡು ಬಂದವು. ದೇವಸ್ಥಾನದ ಅರ್ಚಕರು ತಳಿರು ತೋರಣಗಳಿಂದ ದೇವಾಲಯ ಅಲಂಕರಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಶಿವನ ದೇಗುಲ ಒಳಗೊಂಡಂತೆ ಶಾಂತಿನಗರದ ಸಿದ್ಧಿ ವಿನಾಯಕ ಮತ್ತು ನವಗ್ರಹ ದೇವಸ್ಥಾನ, ಬನಶಂಕರಿ ದೇವಾಲಯ, ಎಪಿಎಂಸಿ ಯಾರ್ಡ್ನ ಪಶುಪತಿನಾಥ ದೇವಸ್ಥಾನ, ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇಗುಲ, ಬಿ.ಎಚ್.ರಸ್ತೆಯ ಮಹಾಲಕ್ಷ್ಮಿ ದೇವಾಲಯ, ಇತರೆಡೆಗಳಲ್ಲಿ ಶಿವರಾತ್ರಿ ಸಂಭ್ರಮಾಚರಣೆಗೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದವು.
ರಥಯಾತ್ರೆ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದಲ್ಲಿ ಶನಿವಾರ ರಥಯಾತ್ರೆ ನಡೆಯಿತು. ಸದಾಶಿವನಗರದ ಬಳಿ ಯಾತ್ರೆಗೆ ಚಾಲನೆ ನೀಡಲಾಯಿತು. ಭದ್ರಮ್ಮ ಛತ್ರ ವೃತ್ತದ ಬಳಿ ಕೊನೆಯಾಯಿತು.
ಪ್ರಮುಖ ವೃತ್ತ, ರಸ್ತೆಗಳಲ್ಲಿ 21 ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಯಿತು. ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೆ ಶಿವಲಿಂಗಗಳ ದರ್ಶನ ಹಾಗೂ ಅಧ್ಯಾತ್ಮ ಚಿತ್ರ ಪ್ರದರ್ಶನ ಇರಲಿದೆ. ರಥಯಾತ್ರೆಗೆ ಮುಖಂಡ ಎಸ್.ಪಿ.ಚಿದಾನಂದ್ ಚಾಲನೆ ನೀಡಿದರು. ವಿ.ವಿ ಸಂಚಾಲಕಿ ಬಿ.ಕೆ.ಸುಜಾತಾ ಇತರರು ಹಾಜರಿದ್ದರು.
ಸಿದ್ಧಗಂಗಾ ಮಠದಲ್ಲಿ ಜ. 16ರಂದು ರಥೋತ್ಸವ ನೆರವೇರಲಿದೆ. ಇದಕ್ಕೂ ಮುನ್ನ ಫೆ. 15ರಂದು ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಸಂಜೆ ಬೆಳ್ಳಿ ರಥೋತ್ಸವ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ. ಶಿವರಾತ್ರಿ ಆಚರಣೆಗಾಗಿ ಮಠಕ್ಕೆ ಬರುವ ಭಕ್ತರು ಜಾತ್ರೆ ಮುಗಿದ ನಂತರ ತಮ್ಮ ಊರುಗಳಿಗೆ ತೆರಳಲಿದ್ದಾರೆ. ಇಡೀ ರಾತ್ರಿ ಮಠದಲ್ಲಿ ನಡೆಯುವ ಜಾಗರಣೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.