ADVERTISEMENT

ತುಮಕೂರು | ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:40 IST
Last Updated 28 ಜನವರಿ 2026, 6:40 IST
ತುಮಕೂರಿನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನಕಟ್ಟೆ ಬಳಿ ಕಟ್ಟಡ ನಿರ್ಮಾಣ
ತುಮಕೂರಿನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನಕಟ್ಟೆ ಬಳಿ ಕಟ್ಟಡ ನಿರ್ಮಾಣ   

ತುಮಕೂರು: ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಗಾರೆನರಸಯ್ಯನಕಟ್ಟೆಯ ಖರಾಬು ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ವಿರೋಧಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತರು ತಕ್ಷಣ ಎಚ್ಚೆತ್ತುಕೊಂಡು ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲಸ ನಿಲ್ಲಿಸದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮದ ಪ್ರಕಾರ ಯಾವುದೇ ಕೆರೆ, ಕಟ್ಟೆ ಅಂಗಳದಿಂದ 30 ಮೀಟರ್ ಅಂತರದ ಬಫರ್ ವಲಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಗಾರೆನರಸಯ್ಯನಕಟ್ಟೆ 19.1 ಎಕರೆ ವಿಸ್ತೀರ್ಣ ಹೊಂದಿದ್ದು, ಹೊಸ ಕಾನೂನಿನ ಪ್ರಕಾರ ಕೆರೆ ಅಂಗಳದಿಂದ 12 ಮೀಟರ್ ಬಫರ್ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಮಹಾನಗರ ಪಾಲಿಕೆಯವರು ಕಟ್ಟಡ ಕಟ್ಟಲು ಪರವಾನಗಿ ಕೊಟ್ಟಿರುವುದು ಸರ್ಕಾರ ಹಾಗೂ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿ ವರ್ಗ ಕಟ್ಟಡವನ್ನು ಅಕ್ರಮವಾಗಿ ಕಟ್ಟಲು ನೆರವಾಗುವ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.

ಗಾರೆನರಸಯ್ಯನಕಟ್ಟೆ ನೂರಾರು ವಲಸೆ ಬರುವ ಹಾಗೂ ಸ್ಥಳೀಯ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಅಂತರ್ಜಲ ವೃದ್ಧಿಗೆ ಕಾರಣವಾಗಿರುವ ಕೆರೆಯು ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ನೈಸರ್ಗಿಕ ಹವಾನಿಯಂತ್ರಣದ ಜಾಗವಾಗಿದೆ. ಆದ್ದರಿಂದ ಪಾಲಿಕೆ ಆಯುಕ್ತರು ಬಫರ್ ವಲಯದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲು ನೀಡಿರುವ ಪರವಾನಗಿ ರದ್ದುಗೊಳಿಸಬೇಕು. ಪರವಾನಗಿ ನೀಡಲು ಸಹಕರಿಸಿರುವ ಸಿಬ್ಬಂದಿ ಮೇಲೆ ಸಿಸ್ತು ಕ್ರಮ ತೆಗೆದುಕೊಂಡು ಕೆರೆ ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ತುಮಕೂರಿನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನಕಟ್ಟೆ ಬಳಿ ಕಟ್ಟಡ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.