ತುಮಕೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಇಡೀ ದಿನ ಜಿಟಿಜಿಟಿ ಮಳೆ ಸುರಿಯಿತು. ಬೆಳಗ್ಗೆ ಶುರುವಾದ ಮಳೆ ಸಂಜೆಯ ತನಕ ಬಿತ್ತು. ಮೋಡ ಕವಿದ ವಾತಾವರಣ ಮುಂದುವರಿದಿತ್ತು.
ಸುರಿಯುತ್ತಿದ್ದ ಸೋನೆ ಮಳೆಯಲ್ಲಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ನೌಕರರು ಕೊಡೆ ಹಿಡಿದು ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಪೋಷಕರು ತಮ್ಮ ಮಕ್ಕಳನ್ನು ಶಾಲಾ ವಾಹನ ಹತ್ತಿಸಲು ಕೊಡೆಯ ಆಶ್ರಯ ಪಡೆದಿದ್ದರು. ಫುಟ್ಪಾತ್ ವ್ಯಾಪಾರಿಗಳು, ಬೀದಿ ಬದಿ ಅಂಗಡಿಯವರು, ಕಟ್ಟಡ ಕಾರ್ಮಿಕರ ಕೆಲಸಗಳಿಗೆ ಮಳೆ ಅಡ್ಡಿ ಪಡಿಸಿತು. ಇತ್ತ ಬಿರುಸಾಗಿಯೂ ಸುರಿಯದ, ಪೂರ್ತಿಯಾಗಿ ನಿಲ್ಲದ ಮಳೆಯಿಂದ ಜನ ಇಕ್ಕಟ್ಟಿಗೆ ಸಿಲುಕಿದ್ದರು.
ವಾಹನ ಸವಾರರು ಮಳೆಯಲ್ಲೇ ನೆನೆಯುತ್ತ ಸಾಗಿದರು. ನಗರದ ಎಂ.ಜಿ ರಸ್ತೆಯಲ್ಲಿ ಮಳೆಯ ಮಧ್ಯೆ ಕೊಡೆಗಳ ಖರೀದಿಯೂ ನಡೆಯಿತು. ನಾನಾ ಕೆಲಸದ ನಿಮಿತ್ತ ನಗರಕ್ಕೆ ಭೇಟಿ ನೀಡಿದವರು ಕೈಯಲ್ಲಿ ಕೊಡೆ ಹಿಡಿದು ವಾಪಸಾದರು. ಬೆಳಗ್ಗೆ 6 ಗಂಟೆಯಿಂದಲೇ ಮಳೆ ಆರಂಭವಾಗಿತ್ತು. ದಿನಪೂರ್ತಿ ಚಳಿಯ ವಾತಾವರಣ ಇತ್ತು. ಸಾರ್ವಜನಿಕರು ಬೆಚ್ಚಗಿನ ಬಟ್ಟೆ ಧರಿಸಿ ಮನೆಯಿಂದ ಹೊರ ಬರುತ್ತಿದ್ದರು.
ವಿಶ್ವವಿದ್ಯಾಲಯದ ಮೈದಾನದಲ್ಲಿ ಸುರಿಯುವ ಮಳೆಯಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದರು. ವಾಲಿಬಾಲ್, ಕ್ರಿಕೆಟ್ ಜತೆಗೆ ಮಳೆಯನ್ನೂ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.