ಪಾವಗಡ: ತಾಲ್ಲೂಕಿನಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿ ಪ್ರಗತಿಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಶುಕ್ರವಾರ ಪರಿಶಿಲಿಸಿದರು.
ಕೆ.ರಾಂಪುರ ಬಳಿ ನಿರ್ಮಾಣಗೊಂಡಿರುವ ರೈಲ್ವೆ ನಿಲ್ದಾಣ ಕಾಮಗಾರಿ, ಪಟ್ಟಣ-ಪೆನುಗೊಂಡ ರಸ್ತೆಯ ಟಿ.ಎನ್ ಪೇಟೆ ಬಳಿಯ ರೈಲ್ವೆ ನಿಲ್ದಾಣ ಕಾಮಗಾರಿಯ ಪ್ರಗತಿ ವೀಕ್ಷಿಸಿದರು.
ಕೆ ರಾಂಪುರ ಬಳಿಯ ರೈಲ್ವೆ ನಿಲ್ದಾಣಕ್ಕೆ ದೊಡ್ಡಹಳ್ಳಿ ಎಂದು ಹೆಸರಿಟ್ಟಿರುವ ಬಗ್ಗೆ ವಿವಾದ ಮುಂದುವರಿದಿದ್ದು, ಸ್ಥಳೀಯರು ನಿಲ್ದಾಣದ ಹೆಸರನ್ನು ‘ಕೆ.ರಾಂಪುರ ರೈಲ್ವೆ ನಿಲ್ದಾಣ’ ಎಂದು ಮರುನಾಮಕರಣ ಮಾಡುವಂತೆ ಸಚಿವ ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಚಿವ ವಿ ಸೋಮಣ್ಣ ಮಾತನಾಡಿ, ಕೆ ರಾಂಪುರ ಬಳಿಯ ರೈಲ್ವೆ ನಿಲ್ದಾಣದ ಹೆಸರಿನ ಬಗ್ಗೆ ಗೊಂದಲ ಇತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹೆಸರಿನ ಬಗೆಗಿನ ಸಮಸ್ಯೆಯನ್ನು ಬಗೆಹರಿಸುವಂತೆ ತಿಳಿಸಿದ್ದೇನೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಆರ್ಎಸ್ಎಸ್ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ. ರಾಜ್ಯದ ಹಲವೆಡೆ ಅತಿವೃಷ್ಟಿಯಾಗಿ ಸಮಸ್ಯೆಯಾಗಿದೆ. ಪಾವಗಡ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಸಮರ್ಪಕ ಮಳೆ ಬಿದ್ದಿಲ್ಲ. ಇಂತಹ ಸಮಸ್ಯೆ ಇರುವ ಪ್ರದೇಶಗಳಿಗೆ ಆದ್ಯತೆ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು. ಸಲ್ಲದ ಗೊಂದಲ ಸೃಷ್ಟಿಸಬಾರದು. ಅಭಿವೃದ್ಧಿಯತ್ತ ಗಮನಕೊಡಬೇಕು ಎಂದರು.
ಶಾಸಕ ಎಚ್.ವಿ. ವೆಂಕಟೇಶ್, ಸಂಸದ ಪಾರ್ಥಸಾರಥಿ, ಆಂಧ್ರ ಮಾಜಿ ಎಂಎಲ್ಸಿ ಗುಂಡಮಲ ತಿಪ್ಪೇಸ್ವಾಮಿ, ಧರ್ಮವರಂ ಟಿಡಿಪಿ ಪಕ್ಷದ ಉಸ್ತುವಾರಿ ಪರಿಟಾಲ ಶ್ರೀರಾಮ್, ರೈಲ್ವೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಟಿಡಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.