ADVERTISEMENT

ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:27 IST
Last Updated 18 ಫೆಬ್ರುವರಿ 2026, 6:27 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯ 2,295 ಕ್ಷಯ ರೋಗಿಗಳಿಗೆ ಕಳೆದ 6 ತಿಂಗಳಿನಿಂದ ‘ನಿ–ಕ್ಷಯ್‌ ಪೋಷಣೆ’ ಯೋಜನೆಯಡಿ ಆರ್ಥಿಕ ನೆರವು ಸಿಗದೆ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ.

ರೋಗಿಗಳ ಆರೋಗ್ಯ ಸುಧಾರಣೆಯ ಉದ್ದೇಶದಿಂದ, ಪೌಷ್ಟಿಕಾಂಶ ಆಹಾರ ಒದಗಿಸಲು ಪ್ರತಿ ತಿಂಗಳು ₹1 ಸಾವಿರ ಹಣ ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ‘ನಿ–ಕ್ಷಯ್‌ ಪೋಷಣೆ’ ಯೋಜನೆ ಜಾರಿಗೊಳಿಸಿದೆ. 2024ರ ನವೆಂಬರ್‌ ತನಕ ಒಬ್ಬ ರೋಗಿಗೆ ಪ್ರತಿ ತಿಂಗಳು ₹400 ಪಾವತಿಸಲಾಗುತ್ತಿತ್ತು. ನವೆಂಬರ್‌ ನಂತರ ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಆದರೆ, ಈ ಹಣ ಸಕಾಲಕ್ಕೆ ತಲುಪುತ್ತಿಲ್ಲ.

2025ರ ಮಾರ್ಚ್‌ ಮತ್ತು ಜುಲೈನಲ್ಲಿ ರೋಗಿಗಳ ಖಾತೆಗೆ ಹಣ ಸಂದಾಯವಾಗಿತ್ತು. ಕಳೆದ 6 ತಿಂಗಳಿನಿಂದ ಹಣ ರೋಗಿಗಳ ಕೈ ಸೇರಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತಿದೆ. ಅವರ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ 2003ರಿಂದ 2024ರ ಅಂತ್ಯದ ವರೆಗೆ 64,562 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. 2025ರಲ್ಲಿ ಹೊಸದಾಗಿ 1,586 ಮಂದಿಯಲ್ಲಿ ಕ್ಷಯರೋಗ ಇರುವುದು ದೃಢಪಟ್ಟಿದೆ. ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ 2,500 ಮಂದಿಯನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 1,586 ಜನರಲ್ಲಿ ರೋಗ ಖಚಿತಪಟ್ಟಿದೆ. ಈ ವರ್ಷದ ಒಂದು ತಿಂಗಳಲ್ಲಿ 205 ಮಂದಿ ಹೊಸದಾಗಿ ಚಿಕಿತ್ಸೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಹೊಸದಾಗಿ ಗುರುತಿಸಿದ ರೋಗಿಗಳಿಗೆ ‘ನಿ–ಕ್ಷಯ್‌ ಮಿತ್ರ’ ಯೋಜನೆಯಡಿ ಸಹಾಯದ ಹಸ್ತ ಚಾಚಲಾಗುತ್ತಿದೆ. ಜಿಲ್ಲೆಯಾದ್ಯಂತ 472 ದಾನಿಗಳನ್ನು ಗುರುತಿಸಿದ್ದು, ಅವರ ಮುಖಾಂತರ ರೋಗಿಗಳಿಗೆ ಆಹಾರ ಕಿಟ್‌ ವಿತರಿಸಲಾಗುತ್ತಿದೆ. ಧಾನ್ಯ, ಬೇಳೆ ಇತರೆ ಆಹಾರ ಪದಾರ್ಥಗಳನ್ನು ರೋಗಿಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಸರ್ಕಾರದ ಹಣದ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರಿಂದ ಆಹಾರ ಕಿಟ್‌ಗಳನ್ನು ಪಡೆದು ರೋಗಿಗಳಿಗೆ ನೀಡಲಾಗುತ್ತಿದೆ.

ಸರ್ಕಾರ ಕ್ಷಯರೋಗ ನಿರ್ಮೂಲನೆಗೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಜಾಗೃತಿ ಜಾಥಾ, ಇತರೆ ಕಾರ್ಯಗಳಿಂದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರಲ್ಲಿ ರೋಗದ ಕುರಿತು ತಿಳಿಸಲಾಗುತ್ತಿದೆ. ರೋಗ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ರೋಗ ಪತ್ತೆಗೆ ಖಾಸಗಿ ಆಸ್ಪತ್ರೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವರ್ಷದಲ್ಲಿ 140 ಮಂದಿ ಸಾವು

ಜಿಲ್ಲೆಯಾದ್ಯಂತ ಕಳೆದ ಒಂದು ವರ್ಷದಲ್ಲಿ 140 ಮಂದಿ ಕ್ಷಯ ರೋಗಿಗಳು ಮೃತಪಟ್ಟಿದ್ದಾರೆ. ರೋಗ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ರೋಗಿಗಳಿಗೆ ಸರ್ಕಾರಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. 25 ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಒಂದಕ್ಕಿಂತ ಕಡಿಮೆ ಪ್ರಕರಣ ದಾಖಲಾದ ಪಂಚಾಯಿತಿಗಳನ್ನು ಕ್ಷಯ ಮುಕ್ತ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 25 ಗ್ರಾ.ಪಂ ಗುರುತಿಸಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.