ತುಮಕೂರು: ನ್ಯಾಯಾಧೀಶರ ಪ್ರಯತ್ನ ಹಾಗೂ ವಕೀಲರ ಸತತ ಹೋರಾಟಕ್ಕೆ ಮಣಿದಿರುವ ಕಂದಾಯ ಇಲಾಖೆ ಕೊನೆಗೂ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದೆ.
ತಾಲ್ಲೂಕಿನ ಕಸಬಾ ಉತ್ತರ ಹೋಬಳಿಯ ಅಮಲಾಪುರ ಗ್ರಾಮದ ಸರ್ವೆ ನಂ. 31ರಲ್ಲಿ ಒಟ್ಟು 10 ಎಕರೆ ಜಾಗವನ್ನು ಮಂಜೂರು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಮಂಜೂರಾಗಿರುವ 10 ಎಕರೆಯಲ್ಲಿ 5 ಎಕರೆಯನ್ನು ಹೊಸದಾಗಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ಹಾಗೂ ಉಳಿದ 5 ಎಕರೆಯಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ನಿರ್ಮಾಣಕ್ಕೆ ಹಂಚಿಕೆ ಮಾಡುವಂತೆ ಆದೇಶಿಸಿದ್ದಾರೆ.
ಹೊಸದಾಗಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಗೊಂಡು, ಅಲ್ಲಿಗೆ ನ್ಯಾಯಾಲಯದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡ ನಂತರ ನ್ಯಾಯಾಲಯದ ಕಟ್ಟಡ ಇರುವ ಜಾಗವನ್ನು ಜಿಲ್ಲಾ ಆಡಳಿತದ ವಶಕ್ಕೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಾಲಯ ಕಟ್ಟಡಕ್ಕೆ ಜಾಗ ಪಡೆದುಕೊಳ್ಳಲು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಯಂತಕುಮಾರ್ ಅವರು ವಕೀಲರ ಸಂಘದ ಪ್ರಮುಖರ ಜತೆಗೆ ಸಾಕಷ್ಟು ಬಾರಿ ಸಭೆ ನಡೆಸಿದ್ದರು. ಸಂಘದ ವತಿಯಿಂದ ಹೋರಾಟಕ್ಕೂ ವಕೀಲರು ಸಜ್ಜಾಗಿದ್ದರು. ಜಿಲ್ಲಾ ಆಡಳಿತ ಜಮೀನು ನೀಡಲು ಸಾಕಷ್ಟು ತಡ ಮಾಡಿತ್ತು. ಕೊನೆಗೂ ವಕೀಲರ ಒತ್ತಡಕ್ಕೆ ಮಣಿದು ಜಮೀನು ಮಂಜೂರಾತಿ ಕೋರಿ ಕಂದಾಯ ಇಲಾಖೆಗೆ ಜಿಲ್ಲಾ ಆಡಳಿತ ಪ್ರಸ್ತಾವ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.