
ತುರುವೇಕೆರೆ: ತಾಲ್ಲೂಕಿನ 98 ಹೈನುಗಾರರಿಗೆ ವಿವಿಧ ಯೋಜನೆಯಡಿ ದೊರೆತಿರುವ ₹38 ಲಕ್ಷ ಪರಿಹಾರ ಚೆಕ್ ಅನ್ನು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರಭವನ ಸಭಾಂಗಣದಲ್ಲಿ ನಡೆದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಂದಿನಿ ಉತ್ಪನ್ನವನ್ನು ದೇಶವಿದೇಶಗಳಲ್ಲಿ ಸರಬರಾಜು ಮಾಡುತ್ತಿರುವ ಕೆಎಂಎಫ್ ನಂಬಿಕೆಗೆ ಮತ್ತೊಂದು ಹೆಸರಾಗಿದೆ. ಈ ಸಹಕಾರ ಸಂಘಕ್ಕೆ ಹಾಲನ್ನು ಹಾಕುವ ಹೈನುಗಾರರಿಗೆ ನಷ್ಟ ಎಂಬುದೇ ಇಲ್ಲ. ಕೆಎಂಎಫ್ ಹೈನುಗಾರರಿಗೆ ನೂರಾರು ಸವಲತ್ತುಗಳನ್ನು ನೀಡುತ್ತದೆ. ರಾಸುಗಳಿಗೆ ಮೇವು, ವಿಮೆ, ಔಷದೋಪಚಾರ, ಸಾಕಲು ಅಗತ್ಯ ಪರಿಕರ, ವಿವಿಧ ಯಂತ್ರಗಳು ಸೇರಿದಂತೆ ಹಲವಾರು ಸವಲತ್ತುಗಳನ್ನು ಹೈನುಗಾರರಿಗೆ ನೀಡುತ್ತಿರುವುದರಿಂದಲೇ ಸಹಕಾರ ಸಂಘ ದೇಶ, ವಿದೇಶಗಳಲ್ಲಿ ಜನಪ್ರಿಯವಾಗಿದೆ ಎಂದು ಹೇಳಿದರು.
ಅರೆಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಜಗದೀಶ್, ಬೆನಕನಕೆರೆಯ ರಾಮಚಂದ್ರು, ಗೋಣಿತುಮಕೂರಿನ ಶಂಕರೇಗೌಡ, ಸುನಿತಾ, ಚಂದ್ರಶೇಖರ್, ರಂಗರಾಜು, ಪ್ರಕಾಶ್, ಪ್ರಶಾಂತ್, ವೆಂಕಟೇಶ್, ವಿಸ್ತೀರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಸುನಿಲ್, ಡಾ.ಲೋಹಿತ್, ವಾಜಿದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.