ತುಮಕೂರು: ಎಲ್ಲರಿಗೂ ಶರಣು ಶರಣಾರ್ಥಿ ಎಂದು ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕಾ ಸಚಿವ ಪ್ರತಾಪಚಂದ್ರ ಸಾರಂಗಿ ಕನ್ನಡದಲ್ಲಿ ಮಾತು ಆರಂಭಿಸಿದರು.
ನನಗೆ ಕನ್ನಡ ಅರ್ಥ ಆಗುತ್ತದೆ ಆದರೆ ತಿಳಿಯುವುದಿಲ್ಲ ಎಂದರು. 10 ಸಾವಿರ ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುವ ಮೂಲಕ ಶಿವಕುಮಾರ ಸ್ವಾಮೀಜಿ ದೊಡ್ಡವರು ಎನಿಸಿದ್ದಾರೆ.
ಸಂಸ್ಕೃತವನ್ನು ಶಿಕ್ಷಣದಲ್ಲಿ ಇಲ್ಲಿ ಕಡ್ಡಾಯಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಅದು ಒಂದು ಭಾಷೆಯಲ್ಲ ಅದು ನಮ್ಮ ಜಾಗತಿಕ ಸಂಸ್ಕೃತಿ ಎಂದರು.
ಇಂತಹ ಸಂಸ್ಕೃತವನ್ನು ಇಲ್ಲಿ ಎಲ್ಲ ಮಕ್ಕಳಿಗೆ ಕಲಿಸುತ್ತಿದ್ದಾರೆ. ಇದು ದೊಡ್ಡ ಸಾಧನೆ ಎಂದರು. ಸಂಸ್ಕೃತದ ಶ್ಲೋಕಗಳನ್ನು ಉದಾಹರಿಸಿದರು. ನಮ್ಮ ಗುರುಕುಲ ಪದ್ಧತಿಯ ಶಿಕ್ಷಣ ಕಾಡುಗಳಲ್ಲಿ ನಡೆಯುತ್ತಿತ್ತು. ಶಿಕ್ಷಣ ಇಲ್ಲದಿದ್ದವರು ಪಶುವಿಗೆ ಸಮಾನ ಎನ್ನುವಂತೆ ಇತ್ತು. ಆದರೆ ಈಗ ಶಿಕ್ಷಣ ಎಲ್ಲರಿಗೂ ದೊರೆಯುತ್ತಿದೆ ಎಂದು ಪ್ರತಾಪಚಂದ್ರ ಸಾರಂಗಿ ಹೇಳಿದರು.
ದಾಸೋಹ ದಿನ ಎಂದು ಘೋಷಿಸಿ: ಲಕ್ಷಾಂತರ ಬಡ ವಿದ್ಯಾರ್ಥಿಗಳ ಆರಾಧ್ಯ ದೈವ ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆಯ ಈ ದಿನವನ್ನು ದಾಸೋಹ ದಿನ ಎಂದು ಮುಖ್ಯಮಂತ್ರಿ ಅವರು ಘೋಷಿಸಬೇಕು ಎಂದು ವಚನಾನಂದ ಸ್ವಾಮೀಜಿ ಕೋರಿದರು.
ನಾಡು ಶಿವಕುಮಾರ ಸ್ವಾಮೀಜಿ ಅವರು ನಡೆದ ಬೆಳಕಿನ ಹಾದಿಯಲ್ಲಿ ನಡೆಯಬೇಕು ಎಂದು ಆಶಿಸಿದರು.
ವೀರಾಪುರ ನಾಡಿನ ಪ್ರಸಿದ್ಧ ಕ್ಷೇತ್ರ ಆಗಬೇಕು ಎನ್ನುವ ದಿಸೆಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ನುಡಿದರು. ನಾಡಿನಾದ್ಯಂತ ಸ್ವಾಮೀಜಿ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಶಿಕ್ಷಣದ ಬೆಳಕು ನೀಡಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.