ತುಮಕೂರು: ಮೀಸಲಾತಿ ಕಲ್ಪಿಸಿದರೂ ಸಹ ಸಮುದಾಯದ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಒಂದಾಗಿ ಸಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ಮಾಡಿದರು.
ನಗರದಲ್ಲಿ ಗುರುವಾರ ಸ್ವಾಭಿಮಾನಿ ಮಾದಿಗ ಮಹಾಸಭಾದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿ, ‘ಬೇರೆ ಸಮುದಾಯಗಳ ನಾಯಕರಿಗೆ ಜಾತಿಯ ಬಗ್ಗೆ ಬದ್ಧತೆ ಇದೆ. ನಮ್ಮ ಜನಾಂಗದವರು ಜಾತಿ ಹೆಸರು ಹೇಳುವುದಕ್ಕೂ ಹಿಂಜರಿಯುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಪರಿಸ್ಥಿತಿಗಳಿಂದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜಕೀಯದಲ್ಲಿ ಏನೇ ವ್ಯತ್ಯಾಸವಿದ್ದರೂ ಒಂದೇ ತಾಯಿ ಮಕ್ಕಳು ಎನ್ನುವುದನ್ನು ಅರಿಯಬೇಕು. ಸಮುದಾಯಕ್ಕಾಗಿ ಕೆಲಸ ಮಾಡಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ, ‘ಹೆಚ್ಚಿನ ಸಂಖ್ಯೆಯ ಜನರಿದ್ದರೂ ಒಗ್ಗಟ್ಟಿನ ಕೊರತೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸದಸ್ಯತ್ವ ಪಡೆಯಬೇಕು. ಒಂದು ಕಾಲದಲ್ಲಿ 20 ಶಾಸಕರನ್ನು ಹೊಂದಿದ್ದ ಮಾದಿಗ ಸಮುದಾಯ ಪ್ರಸ್ತುತ ಸಂಘಟನೆಯ ಕೊರತೆ ಎದುರಿಸುತ್ತಿದೆ. ನೇಮಕಾತಿಯಲ್ಲೂ ನಮ್ಮ ಸಮುದಾಯದ ಸಾಧನೆ ಶೂನ್ಯವಾಗಿದೆ’ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ‘ಕೋಮುವಾದ ಎನ್ನುವುದು ಬೇರೆ ಬೇರೆ ಸಮುದಾಯಗಳಿಗೆ ಇಲ್ಲದ್ದು, ಮಾದಿಗ ಸಮುದಾಯಕ್ಕೆ ಮಾತ್ರ ಏಕೆ? ಶೀಘ್ರವಾಗಿ ಸದಸ್ಯತ್ವ ಪೂರ್ಣಗೊಳಿಸಬೇಕು. ಯೋಗ್ಯರಿಗೆ ಅವಕಾಶ ಸಿಕ್ಕಾಗ ಸಂಘ ಉತ್ತಮವಾಗಿ ಬೆಳೆಯುತ್ತದೆ’ ಎಂದು ತಿಳಿಸಿದರು.
ಸ್ವಾಭಿಮಾನಿ ಮಾದಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಗದೀಶ್, ಮುಖಂಡರಾದ ಬಿ.ಎನ್.ಚಂದ್ರಪ್ಪ, ಗಂಗಹನುಮಯ್ಯ, ತಿಮ್ಮರಾಯಪ್ಪ, ಬಿ.ಎಚ್.ಅನಿಲ್ಕುಮಾರ್, ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ರೂಪಾಶೆಟ್ಟಾಳಯ್ಯ, ಮರಿಚೆನ್ನಮ್ಮ, ಅರುಂಧತಿ, ಲಕ್ಷ್ಮಿಕಾಂತ್, ಮುರುಳೀಧರ್, ವೈ.ಕೆ.ಬಾಲಕೃಷ್ಣಪ್ಪ, ಚಂದ್ರಕುಮಾರ್, ಶಿವನಂಜಪ್ಪ, ಚಿಕ್ಕರಂಗಯ್ಯ, ನರಸೀಯಪ್ಪ, ವಾಲೆ ಚಂದ್ರಯ್ಯ, ನರಸಿಂಹಮೂರ್ತಿ, ಚಂದ್ರಹಾಸ್, ನಾಗರಾಜ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.