ADVERTISEMENT

ಶಿರಾದಲ್ಲಿ ಮಳೆ ಲೆಕ್ಕಿಸದೆ ತರಕಾರಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 5:52 IST
Last Updated 8 ಜನವರಿ 2021, 5:52 IST
ಶಿರಾದಲ್ಲಿ ಮಳೆಯಲ್ಲಿಯೇ ವ್ಯಾಪಾರ ವ್ಯಾಪಾರ ನಡೆಯಿತು
ಶಿರಾದಲ್ಲಿ ಮಳೆಯಲ್ಲಿಯೇ ವ್ಯಾಪಾರ ವ್ಯಾಪಾರ ನಡೆಯಿತು   

ಶಿರಾ: ನಗರದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಸೂಕ್ತ ಜಾಗವಿಲ್ಲದೆ ರಸ್ತೆ ಬದಿಯಲ್ಲಿ ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ ಮಳೆಯಿಂದಾಗಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಂಕಷ್ಟ ಪಡುವಂತಾಯಿತು.

ನಗರದಲ್ಲಿ ಬುಧವಾರ ರಾತ್ರಿ ಪ್ರಾರಂಭವಾದ ಸೋನೆ ಮಳೆ ಬೆಳಿಗ್ಗೆವರೆಗೂ ಸುರಿದ ಕಾರಣ ಬೀದಿ ಬದಿ ವ್ಯಾಪಾರಿಗಳು ಸಂಕಟ ಪಡುವಂತಾಯಿತು.

ಮಳೆಯಲ್ಲಿಯೇ ತಲೆಗೆ ಪ್ಲಾಸ್ಟಿಕ್ ಚೀಲ ಹೊದ್ದುಕೊಂಡು, ವ್ಯಾಪಾರ ಮಾಡಬೇಕಾಯಿತು. ಗ್ರಾಮೀಣ ಪ್ರದೇಶದಿಂದ ಬಂದ ರೈತರೇ ಇಲ್ಲಿ ಹೆಚ್ಚು ವ್ಯಾಪಾರ ಮಾಡುವುದು ವಿಶೇಷವಾಗಿದೆ.

ADVERTISEMENT

ಶಿರಾ ನಗರಸಭೆಯಾಗಿ 2006ರಲ್ಲಿ ಮೇಲ್ದರ್ಜೆಗೆ ಏರಿದ್ದರೂ, ತರಕಾರಿ ಮಾರುಕಟ್ಟೆ ಇಲ್ಲದಿರುವುದರಿಂದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವರಿಂದ ತರಕಾರಿ ಖರೀದಿ ಮಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ 234ರ ಬುಕ್ಕಾಪಟ್ಟಣ ರಸ್ತೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ಬೆಳಗಿನ ಸಮಯದಲ್ಲಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ಜೊತೆಗೆ ಗುರುವಾರ ಬೆಳಿಗ್ಗೆ ಮಳೆ ಸಹ ಬರುತ್ತಿದ್ದ ಕಾರಣ ಮಳೆಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿದ್ದರು. ಮಳೆಯಲ್ಲಿ ತೋಯ್ದ ತರಕಾರಿಗಳನ್ನು ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದರು. ಮಳೆಯಲ್ಲಿ ನೆನೆದಿರುವುದರಿಂದ ತರಕಾರಿ ಬೇಗ ಕೆಟ್ಟು ಹೋಗುತ್ತದೆ ಎಂದು ಅಗತ್ಯಕ್ಕೆ ತಕ್ಕಷ್ಟನ್ನು ಕೆಲವರು ಖರೀದಿ ಮಾಡಿದರೆ ಬಹುತೇಕರು ಮನೆಯಿಂದ ಹೊರಬರಲೇ ಇಲ್ಲ.

ಗ್ರಾಮೀಣ ಪ್ರದೇಶದಿಂದ ತರಕಾರಿ ಮತ್ತು ಸೊಪ್ಪು ತಂದಿದ್ದ ರೈತರಿಗೆ ನಷ್ಟವಾಗುವಂತಾಯಿತು. ವಾಪಸ್‌ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಜನರು ಕೇಳಿದಷ್ಟಕ್ಕೆ ಒಲ್ಲದ ಮನಸ್ಸಿನಿಂದ ಕೊಟ್ಟು ರೈತರು ಮನೆಯ ಕಡೆ ತೆರಳಿದರು.

ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವಂತೆ ನೂತನ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ಗಮನಕ್ಕೆ ತರಕಾರಿ ಮಾರಾಟಗಾರರು ತಂದಿದ್ದರು, ಯಾವುದೇ ಪ್ರಯೋಜನವಾಗಿಲ್ಲ. ವ್ಯವಸ್ಥಿತವಾದ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದು ರೈತರು, ವ್ಯಾಪಾರಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.