ADVERTISEMENT

ತುಮಕೂರು: ವಿಜಯ ದಶಮಿ; ವೈಭವದ ಮೆರವಣಿಗೆಯಲ್ಲಿ ದೈವ ದರ್ಶನ

ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತು ಮೆರವಣಿಗೆ ವೀಕ್ಷಿಸಿದ ಜನರು, ಮೆರವಣಿಗೆಯಲ್ಲಿ ಸಾಗಿದ ಸ್ವಾಮೀಜಿಗಳು, ಗಣ್ಯರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 15:25 IST
Last Updated 19 ಅಕ್ಟೋಬರ್ 2018, 15:25 IST
ತುಮಕೂರಿನಲ್ಲಿ ಬಿಜಿಎಸ್ ವೃತ್ತದಲ್ಲಿ ಶುಕ್ರವಾರ ವಿಜಯದಶಮಿ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಡಾ.ದಿವ್ಯಾ ಗೋಪಿನಾಥ್, ಜಿ.ಬಿ.ಜ್ಯೋತಿಗಣೇಶ್, ಬಸವ ನಾಗಿದೇವ ಸ್ವಾಮೀಜಿ ಇದ್ದರು
ತುಮಕೂರಿನಲ್ಲಿ ಬಿಜಿಎಸ್ ವೃತ್ತದಲ್ಲಿ ಶುಕ್ರವಾರ ವಿಜಯದಶಮಿ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಡಾ.ದಿವ್ಯಾ ಗೋಪಿನಾಥ್, ಜಿ.ಬಿ.ಜ್ಯೋತಿಗಣೇಶ್, ಬಸವ ನಾಗಿದೇವ ಸ್ವಾಮೀಜಿ ಇದ್ದರು   

ತುಮಕೂರು: ನಗರದೆಲ್ಲೆಡೆ ನವರಾತ್ರಿ ವೈಭವ ಕಣ್ಣು ಕೊರೈಸಿತು. ನವರಾತ್ರಿ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆ ನೆರವೇರಿಸಿದ್ದ ಜನರು ಶುಕ್ರವಾರ ವಿಜಯದಶಮಿ ದಿನದಂದು ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ, ಬನಶಂಕರಿ, ಲಕ್ಷ್ಮಿ ಹೀಗೆ ಇಷ್ಟ ದೇವತೆಗಳಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ನವರಾತ್ರಿಯ 9 ದಿನ 9 ವಿವಿಧ ದೇವತೆಗಳನ್ನು ಸ್ತುತಿಸಿದರೆ, ದೇವಿ ಪಾರಾಯಣ, ಪ್ರಸಾದ, ಪುರಾಣ, ಭಕ್ತಿಗೀತೆಗಳ ಗಾಯನ, ದೇವಿಯ ಮಹಿಮೆ ಸಾರುವ ಕಥಾ ಕೀರ್ತನೆ ಹೀಗೆ ನಾನಾ ವಿವಿಧ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು, ದೇವಸ್ಥಾನ ಸಮಿತಿಗಳು, ಬಡಾವಣೆ ನಾಗರಿಕ ಸಮಿತಿಗಳು ಆಯೋಜಿಸಿದ್ದವು.

ವಿಜಯ ದಶಮಿ ದಿನವಾದ ಶುಕ್ರವಾರ ನಗರದ ಪ್ರಮುಖ ರಸ್ತೆಯಲ್ಲಿ ನಗರದ ವಿವಿಧ ಬಡಾವಣೆಯ ಸುಮಾರು 50ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಪೂಜಿಸಲ್ಪಡುವ ಮೂರ್ತಿಗಳ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ವಿವಿಧ ವಾದ್ಯ ವೃಂದ, ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.

ADVERTISEMENT

ನಗರದ ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್. ಚಂದ್ರಿಕಾ ಅವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಚಿತ್ರದುರ್ಗದ ಛಲವಾದಿ ಸಂಸ್ಥಾನಪೀಠದ ಬಸವ ನಾಗಿದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೆರವಣಿಗೆ ಸಾಗಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ತುಮಕೂರು ದಸರಾ ಸಮಿತಿಯ ಗೌರವ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಕಾರ್ಯಾಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಎಲ್.ಮಹೇಶ್, ಸಂಸ್ಕಾರ ಭಾರತಿ ಪ್ರಾಂತ ಕಾರ್ಯಾಧ್ಯಕ್ಷ ಆರ್.ಎಲ್.ರಮೇಶ್‌ಬಾಬು,ಮಹಾನಗರ ಪಾಲಿಕೆ ಮಾಜಿ ಸದಸ್ಯ ಟಿ.ಎಸ್. ಕರುಣಾರಾಧ್ಯ, ದಸರಾ ಸಮಿತಿ ಸದಸ್ಯರು, ವಿವಿಧ ದೇವಸ್ಥಾನಗಳ ಸಮಿತಿ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.