ADVERTISEMENT

ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಲು ವಿಜಯಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 1:16 IST
Last Updated 7 ಆಗಸ್ಟ್ 2021, 1:16 IST
ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ತುಮಕೂರು: ನ್ಯಾಯಾಲಯಗಳ ಆದೇಶದ ಪ್ರತಿಗಳನ್ನು ಕನ್ನಡದಲ್ಲಿಯೂ ನೀಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ನ್ಯಾಯಾಲಯ
ಗಳಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕು ಎಂಬ ವಿಚಾರವನ್ನು ಇಟ್ಟುಕೊಂಡು ರಾಜ್ಯದಾದ್ಯಂತ ‘ಮನವಿ ಅಭಿಯಾನ’ ಹಮ್ಮಿಕೊಂಡಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸು.ಪಿ.ಸುಧೀರ್ ತಿಳಿಸಿದರು.

ನ್ಯಾಯಾಲಯಗಳಲ್ಲಿ ನೀಡುವ ಆದೇಶ, ತೀರ್ಪುಗಳ ಪ್ರತಿಗಳು ಇಂಗ್ಲಿಷ್‌ನಲ್ಲಿ ಇರುತ್ತವೆ. ಇದರಿಂದ ಜನಸಾಮಾನ್ಯರು, ರೈತರು, ಇತರರಿಗೆ ತುಂಬಾ ತೊಂದರೆಯಾಗುತ್ತಿದೆ. ಆದೇಶದ ಪ್ರತಿಗಳಲ್ಲಿ ಇರುವಂತಹ ವಿಚಾರಗಳು ಏನು ಎಂಬುದೇ ತಿಳಿಯದೆ ಬೇರೆಯವರ ಹತ್ತಿರ ಓದಿಸಿ ತಿಳಿಯಬೇಕಾದ ಪ್ರಸಂಗ ಬಂದಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ನೀಡುವಂತಹ ಆದೇಶದ ಪ್ರತಿಗಳನ್ನು ಮಾತೃಭಾಷೆ ಕನ್ನಡದಲ್ಲೂ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೇಡಿಕೆಯನ್ನು ಅನುಷ್ಠಾನಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಸೇನೆ ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಹೇಳಿದರು.

ಕರುನಾಡ ವಿಜಯಸೇನೆ ಪದಾಧಿಕಾರಿಗಳಾದ ಅನಿಲ್ ನಾಯಕ್, ಸುಧಾಕರ್ ರಾವ್, ಎ.ಜಿ.ಹರೀಶ್, ಸಾಲೋಮನ್ ವಿಕ್ಟರ್, ಜಗದೀಶ್, ಜಿ.ರವೀಶ್,ಸಂದೀಪ್, ಸುಧಾಕರ್, ಸಿದ್ದೇಶ್, ದೀಕ್ಷಿತ್, ಯಾಸ್ಮಿನ್ ತಾಜ್, ಮಂಜುಳಾರಾಮ್, ವರಮಹಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.